ನವೆಂಬರ್ನಲ್ಲಿ ಲಕ್ಷ ರುಪಾಯಿ ಬಹುಮಾನದಐ.ಟಿ.ಕ್ವಿಜ್ 2001
ಬೆಂಗಳೂರು : ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯು, ಬೆಂಗಳೂರು ಐ.ಟಿ. ಡಾಟ್ ಕಾಂ 2001 ಅಂಗವಾಗಿ ಸತತ ಎರಡನೇ ವರ್ಷವೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಗ್ರಾಮಾಂತರ ಐ.ಟಿ. ಕ್ವಿಜ್ ಏರ್ಪಡಿಸಿದೆ.
ಐ.ಎಸ್.ಓ. 9001 ಮನ್ನಣೆಗೆ ಪಾತ್ರವಾಗಿರುವ ಕ್ವಿಜ್ಬ್ರೆೃನ್.ಕಾಂ ಹಾಗೂ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ಈ ರಸಪ್ರಶ್ನೆಯ ಅಂತಿಮ ಸ್ಪರ್ಧೆ ನವೆಂಬರ್ 2ರಂದು ನಡೆಯಲಿದೆ. ಪ್ರಥಮ ಮೂರು ಸ್ಥಾನಗಳನ್ನು ಗಳಿಸುವ ತಂಡಗಳು ಲಕ್ಷಾಂತರ ರುಪಾಯಿ ಬಹುಮಾನ ಪಡೆದರೆ, ವಲಯವಾರು ವಿಜೇತರು ಸಾವಿರಾರು ರುಪಾಯಿ ಸ್ಕಾಲರ್ಷಿಪ್ ಪಡೆಯಲಿದ್ದಾರೆ.
ಈ ವಿಷಯವನ್ನು ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ತಿಳಿಸಿದರು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸಲು ರೂಪಿಸಲಾಗಿರುವ ಈ ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕತ್ವವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ವಹಿಸಿಕೊಂಡಿದೆ ಎಂದರು.
ಆಗಸ್ಟ್ 16ರಂದು ಪತ್ರಿಕೆಗಳಲ್ಲಿ ಪ್ರಕಟವಾಗುವ ಇಲಾಖೆಯ ಜಾಹೀರಾತಿನಲ್ಲಿರುವ 20 ಪ್ರಶ್ನೆಗಳಿಗೆ ಸರಿ ಉತ್ತರ ಬರೆಯುವ ಮೂಲಕ ವಿದ್ಯಾರ್ಥಿಗಳು ಸ್ಪರ್ಧೆಗೆ ರಹದಾರಿ ಪಡೆಯಬಹುದಾಗಿದೆ. ಈ ಮೂಲಕ ವಲಯವಾರು ಸ್ಪರ್ಧೆಗೆ ಪ್ರತಿ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ತಲಾ 50 ತಂಡಗಳನ್ನು ಆಯ್ಕೆ ಮಾಡಲಾಗುವುದು. ವಲಯವಾರು ರಸಪ್ರಶ್ನೆ ಸ್ಪರ್ಧೆ ಅಕ್ಟೋಬರ್ 3ರಂದು ಗುಲ್ಬರ್ಗಾದಲ್ಲಿ, ಅ.5ರಂದು ಬಳ್ಳಾರಿಯಲ್ಲಿ, ಅ.9ರಂದು ಧಾರವಾಡದಲ್ಲಿ, 10ರಂದು ಮಂಗಳೂರಿನಲ್ಲಿ , 12ರಂದು ಮೈಸೂರಿನಲ್ಲಿ ಹಾಗೂ ಅ.15ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ರಾಜ್ಯಮಟ್ಟದ ಫೈನಲ್ಸ್ (ವಲಯವಾರು ವಿಜೇತರಿಗೆ) ನವೆಂಬರ್ 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದೆ. ಈ ಸ್ಪರ್ಧೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದ್ದು, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜು ವಿದ್ಯಾರ್ಥಿಳಿಗೆ ಇಲ್ಲಿ ಅವಕಾಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಕನ್ಸಲ್ಟೆನ್ಸಿಯ ಉಪಾಧ್ಯಕ್ಷ ಆರ್. ರಮಣನ್ ಅವರು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸುವುದೇ ಈ ಸ್ಪರ್ಧೆಯ ಉದ್ದೇಶ. ಇದಕ್ಕಾಗಿ ಸಂಸ್ಥೆ ಸಂಪೂರ್ಣ ಹಣಕಾಸಿನ ನೆರವು ನೀಡುತ್ತಿದೆ. ವಿವಿಧ ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯನ್ನು ಹೆಸರಾಂತ ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದಾರೆ ಎಂದರು.
ಕಳೆದ ವರ್ಷ ನಾವು ನಡೆಸಿದ ಈ ಸ್ಪರ್ಧೆ ಭಾರಿ ಯಶಸ್ಸು ಗಳಿಸಿತು. ಬೋರ್ನವೀಟಾ ಕ್ವಿಜ್ ಕಾಂಟೆಸ್ಟ್ ನಂತರ, ರೂರಲ್ ಐ.ಟಿ. ಕ್ವಿಜ್ ಎರಡನೇ ಸ್ಥಾನ ಗಳಿಸುವ ಮೂಲಕ ರಾಷ್ಟ್ರಾದ್ಯಂತ ಹೆಸರು ಮಾಡಿತು. ಐ.ಟಿ. ಆಸ್ಕರ್ಗೂ ಪ್ರವೇಶ ಪಡೆದಿತ್ತು ಎಂದರು.
ಕಳೆದ ವರ್ಷ ಅತ್ಯಲ್ಪ ಕಾಲಾವಕಾಶವಿದ್ದಾಗ್ಯೂ ಕರ್ನಾಟಕಾದ್ಯಂತ 34 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬಾರಿ ಸಾಕಷ್ಟು ಕಾಲಾವಕಾಶ ಇದ್ದು, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಇರುವ ಹಿನ್ನೆಲೆಯಲ್ಲಿ ಸ್ಪರ್ಧಿಗಳ ಸಂಖ್ಯೆ 70 ಸಾವಿರ ದಾಟಬಹುದು ಎಂದು ನಿರೀಕ್ಷಿಸಲಾಗಿದೆ ಎಂದರು.
ಈ ಸ್ಪರ್ಧೆಗೆ ಸಹಕಾರ ನೀಡುತ್ತಿರುವ ಕ್ವಿಜ್ಬ್ರೆೃನ್.ಕಾಂ, ಶೈಕ್ಷಣಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರವನ್ನು ಅವರು ಅಭಿನಂದಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಡಾ. ಇ.ವಿ. ರಮಣರೆಡ್ಡಿ ಹಾಗೂ ಟಿ.ಸಿ.ಎಸ್.ನ ಅತುಲ್ ಟಾಕ್ಲೆ ಅವರು ಕ್ವಿಜ್ ಬಗ್ಗೆ ಹೆಚ್ಚಿವ ವಿವರ ಒದಗಿಸಿದರು.