ಹಂತ ಹಂತವಾಗಿ ಗಣಿಗಾರಿಕೆ ನಿಲ್ಲಿಸಲು ಒಪ್ಪಿಗೆ ಇಲ್ಲ -ಅನಂತ ಮೂರ್ತಿ
ಬೆಂಗಳೂರು : ಕುದುರೆಮುಖದಲ್ಲಿ ಗಣಿಗಾರಿಕೆ ಮುಂದುವರಿಸಲು ಅನುಮತಿ ನೀಡುವಂತೆ ಸುಪ್ರಿಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ಕೇಂದ್ರ ಸರಕಾರ ತಕ್ಷಣವೇ ವಾಪಾಸು ಪಡೆಯಬೇಕು ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಬುಧವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಅರ್ಜಿ ಹಿಂದೆ ತೆಗೆದುಕೊಳ್ಳುವಂತೆ ರಾಜ್ಯ ಸರಕಾರವೇ ಕೇಂದ್ರವನ್ನು ಒತ್ತಾಯಿಸಬೇಕು. ಅಲ್ಲದೆ, ಹಂತ ಹಂತವಾಗಿ ಕುದುರೆಮುಖ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಲು ನಮ್ಮ ಒಪ್ಪಿಗೆ ಯಾವತ್ತೂ ಇಲ್ಲ. ತಕ್ಷಣವೇ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಅನಂತ ಮೂರ್ತಿ ಆಗ್ರಹಿಸಿದರು.
ಗಣಿಗಾರಿಕೆಯಿಂದಾಗಿ ಈಗಾಗಲೇ ಆಗಿರುವ ಅನಾಹುತ ಸರಿಪಡಿಸಲು ಶತಮಾನವೇ ಬೇಕು. ಅಲ್ಲದೆ ಕುದುರೆಮುಖ ಗಣಿಗಾರಿಕಾ ಕಂಪೆನಿಯ ಕೆಲವು ಸಾವಿರ ಕಾರ್ಮಿಕರ ಹಿತರಕ್ಷಣೆಗಾಗಿ ಭದ್ರಾ ನದಿ ದಂಡೆಯ ಮೇಲೆ ಭೂಮಿ ಹೊಂದಿರುವ ಅಸಂಖ್ಯಾತ ರೈತರ ಬಾಳು ಹಾಳು ಮಾಡುವುದು ನ್ಯಾಯವೇ ಎಂದು ಪ್ರಶ್ನಿಸಿದ ಅವರು ತಕ್ಷಣವೇ ಗಣಿಗಾರಿ ನಿಲ್ಲಿಸಿ, ಕಾರ್ಮಿಕರಿಗೆ ಪರ್ಯಾಯ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಬಗ್ಗೆ ಸರಕಾರ ಯೋಚಿಸಬೇಕು ಎಂದರು.
ಸುಪ್ರೀಂ ಕೋರ್ಟ್ ಸೂಚನೆ :
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ನೀಡಿದ ಹೆಚ್ಚುವರಿ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 3,703 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಿಟ್ಟುಕೊಟ್ಟಿರುವ ಬಗ್ಗೆ ಮರು ಪರಿಶೀಲನೆ ಅನಿವಾರ್ಯವೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಕೃಪಾಳ್, ಸಂತೋಷ್ ಹೆಗ್ಡೆ ಮತ್ತು ಶಿವರಾಜ್ ಪಾಟೀಲ್ ಅವರನ್ನೊಳಗೊಂಡ ಪೀಠ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಟ್ರಸ್ಟಿ ಕೆ. ಎಂ. ಚಿಪ್ಪಣ್ಣನವರ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಪರಿಸರ ಹಾಗೂ ಅರಣ್ಯ ಸಚಿವಾಲಯ ಈಗಾಗಲೇ ಗಣಿಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗರಿಷ್ಠ ಐದು ವರ್ಷಗಳ ತನಕ ಗಣಿಗಾರಿಕೆ ನಡೆಸಲು ಕಿಯೋಸಿಲ್ಗೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸುತ್ತಿದೆ ಎಂದ ಪೀಠ , ಅಭಿವೃದ್ಧಿಯನ್ನು ಗಮನದದಲ್ಲಿಟ್ಟುಕೊಂಡು ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಸಲಹೆಗಳನ್ನು ಕೊಡಬಹುದು ಎಂದು ಹೇಳಿದೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...