ಧಾರವಾಡದ ನಾಡಗೀರ ಮಾಸ್ತರರಿಗೆ ವಸಿಷ್ಠ ಪ್ರಶಸ್ತಿ ಪ್ರದಾನ
ಧಾರವಾಡ : ದೈಹಿಕ ಶಿಕ್ಷಣದ ಮಹತ್ವವನ್ನು ನಾಡಿಗೆ ತಿಳಿಸುತ್ತಾ ಬಂದಿರುವ ನಾಡಗೀರ ಮಾಸ್ತರರಿಗೆ ರಾಜ್ಯ ದೈಹಿಕ ಶಿಕ್ಷಕರ ಸಂಘ ವಸಿಷ್ಠ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನಾಡಗೀರ ಮಾಸ್ತರರೆಂದೇ ಪ್ರಸಿದ್ಧರಾದ 88 ವರ್ಷ ವಯಸ್ಸಿನ ಕೃಷ್ಣ ರಾವ್ಜಿ. ನಾಡಗೀರ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡಗೀರ ಮಾಸ್ತರರು, ಇಂದಿನ ಸಮಾಜದಲ್ಲಿ ದೈಹಿಕ ಶಿಕ್ಷಣದ ಸ್ವರೂಪವೇ ಬದಲಾಗಿದೆ. ವಿದ್ಯೆ ಎಂದರೆ ಬ್ರಹ್ಮ ತೇಜಸ್ಸು. ಶಕ್ತಿ ಎನ್ನುವುದು ಕ್ಷಾತ್ರ ತೇಜಸ್ಸು. ಇವೆರಡು ಜೊತೆಯಾದಾಗಲೇ ಮನುಷ್ಯ ಸಂಪೂರ್ಣನಾಗಬಲ್ಲ. ಯಾವುದೇ ಸಂಪತ್ತನ್ನು ಅನುಭವಿಸಲು ದೈಹಿಕ ಸಾಮರ್ಥ್ಯ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ರಾಜ್ಯ ಕಾಲೇಜು ದೈಹಿಕ ಶಿಕ್ಷಕರ ಸಂಘ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಕರ ಸಂಘ , ಸಮಾರಂಭವನ್ನು ಆಯೋಜಿಸಿತ್ತು. ಜೆ.ಎಸ್. ಎಸ್. ಮತ್ತು ಎಸ್ಡಿಎಂ ಸಂಸ್ಥೆ ಕಾರ್ಯದರ್ಶಿ ನ. ವಜ್ರಕುಮಾರ್ ನಾಡಗೀರ ಮಾಸ್ತರರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ಎಂವಿಎಎಸ್ ಸಂಸ್ಥೆಯ ಅಧ್ಯಕ್ಷ ಎಂ.ಪಿ. ಹೊಸಮನಿ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು.
(ಇನ್ಫೋ ವಾರ್ತೆ)