ದೆಹಲಿಯಲ್ಲಿ ಎಸ್.ಎಂ.ಕೃಷ್ಣ, ಬುಧವಾರ ಮಧ್ಯಾಹ್ನ ಪ್ರಧಾನಿ ಭೇಟಿ
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಿದ್ದು , ಬುಧವಾರ ಬೆಳಗ್ಗೆ ರಾಜ್ಯದ ನಿಯೋಗದೊಂದಿಗೆ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡುವರು. ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯದ ನಿಯೋಗ ಪ್ರಧಾನಿ ಅವರನ್ನು ಒತ್ತಾಯಿಸಲಿದೆ.
ರಾಜ್ಯದ ಲೋಕಸಭೆ- ರಾಜ್ಯಸಭೆಯ ಸದಸ್ಯರು, ವಿರೋಧ ಪಕ್ಷಗಳ ಮುಖಂಡರೊಂದಿಗೆ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಭೆ ನಡೆಸಲಿದ್ದು , ರಾಜ್ಯದ ಬರ ಪರಿಸ್ಥಿತಿ ಹಾಗೂ ಕೇಂದ್ರದ ನೆರವಿನ ಬಗ್ಗೆ ಚರ್ಚಿಸುವರು. ಬುಧವಾರ ಮಧ್ಯಾಹ್ನ 12.45 ರ ಸುಮಾರಿಗೆ ರಾಜ್ಯದ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಲಿದೆ.
ಎಸ್.ಎಂ.ಕೃಷ್ಣ ನೇತೃತ್ವದ ರಾಜ್ಯದ ನಿಯೋಗವು ವಿಧಾನಮಂಡಲದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪಿ.ಜಿ.ಆರ್.ಸಿಂಧ್ಯಾ, ಸಿ.ಚೆನ್ನಿಗಪ್ಪ , ಕೆ.ಹೆಚ್.ಶ್ರೀನಿವಾಸ್, ಡಿ.ಎಚ್.ಶಂಕರಮೂರ್ತಿ, ಬಸವರಾಜ ಹೊರಟ್ಟಿ ಹಾಗೂ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡಿದೆ.
ರಾಜ್ಯದ 138 ತಾಲ್ಲೂಕುಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿವಾರಿಸಲು 736.28 ಕೋಟಿ ರುಪಾಯಿಗಳ ನೆರವು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ ಇತ್ತೀಚೆಗಷ್ಟೇ ರಾಜ್ಯದ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿರುವ ಕೇಂದ್ರದ ತಂಡ ಪ್ರಧಾನಿ ವಾಜಪೇಯಿ ಅವರಿಗೆ ವರದಿ ಸಲ್ಲಿಸಿದೆ.
(ಇನ್ಫೋ ವಾರ್ತೆ)