ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್‌ ಕಲಿಕೆ ಬೇಡ, ಸಂಸ್ಥೆಗಳಿಗೆ ಬೀಗ ಬೀಳುತ್ತಿವೆ ನೋಡ

By Staff
|
Google Oneindia Kannada News

ಬೆಂಗಳೂರು: ‘ಕಂಪ್ಯೂಟರ್‌ ಕೋರ್ಸಾ, ಥೂ ಬೇಡಪ್ಪಾ ಅದರ ಸಹವಾಸ, ಸಾಫ್ಟ್‌ವೇರ್‌ ಎಂಜಿನಿಯರುಗಳಿಗೇ ಕೆಲಸ ಇಲ್ವಂತೆ. ಇನ್ನು ನಮಗೆ ಸಿಗುತ್ತಾ ! ಇವತ್ತು ಯಾವ ಕಂಪ್ಯೂಟರ್‌ ಕೋರ್ಸು ಕೆಲಸ ಕಟ್ಟಿಕೊಡುತ್ತದೆ ಹೇಳಿ. ಬೇರೆ ದಾರಿ ಹಿಡಿಯೋದೇ ಸರಿ’. ಇವತ್ತು ನಾಗರಿಕರ ನಾಲಗೆ ಮೇಲೆ ಕುಣಿಯುತ್ತಿರುವ ಇಂಥಾ ಮಾತುಗಳು ಕಾಡು ಹರಟೆಯ ವಸ್ತುಗಳಲ್ಲ ; ಕಂಪ್ಯೂಟರ್‌ ಕೋರ್ಸುಗಳ ಹೇಳಿಕೊಡುತ್ತಿರುವ ಎಷ್ಟೋ ಸಂಸ್ಥೆಗಳಿಗೆ ಬೀಗ ಹಾಕಿಸಿರುವ ಹರಿತ ಶಕ್ತಿಗಳು.

ವ್ಯಾಪಾರ ಇಳಿಕೆ, ಇಲ್ಲವೇ ಎತ್ತಂಗಡಿ : ಎನ್‌ಐಐಟಿ ಕಳೆದ ವಿತ್ತ ವರ್ಷದ ತನ್ನ ಮೊದಲ ತ್ರೆೃಮಾಸಿಕದಲ್ಲಿ 809.2 ದಶಲಕ್ಷ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ಈ ಸಂಸ್ಥೆ ಮಾಡಿರುವ ಲಾಭ ಕೇವಲ 52.9 ದಶಲಕ್ಷ ರುಪಾಯಿ ! ಆಪ್‌ಟೆಕ್‌ ಕೂಡ ಇಂಥಾ ದುಸ್ಥಿತಿಯಿಂದ ಹೊರತಾಗಿಲ್ಲ. 2000ನೇ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ 371.2 ದಶಲಕ್ಷ ನಿವ್ವಳ ಲಾಭ ದೊರಕಿದ್ದ ಈ ಸಂಸ್ಥೆಗೆ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ದಕ್ಕಿರುವ ಲಾಭ 22 ದಶಲಕ್ಷ ಮಾತ್ರ! ಇನ್ನು ಬೆಂಗಳೂರಿನ ಪಬ್‌ಗಳಿಗೇ ಸಂಖ್ಯೆಯಲ್ಲಿ ಸೆಡ್ಡು ಹೊಡೆಯುವಂತೆ ಹುಟ್ಟಿಕೊಂಡಿದ್ದ ಸಣ್ಣ ಪುಟ್ಟ ಕಂಪ್ಯೂಟರ್‌ ಕಲಿಕಾ ಶಾಲೆಗಳ ಬೋರ್ಡುಗಳು ರಾತ್ರೋ ರಾತ್ರಿ ಮಾಯವಾಗಿವೆ.

ಅಮೆರಿಕೆಗೆ ಹಾರಿದವರೇ ಬಂದರಲ್ಲ... : ಅಮೆರಿಕೆಯ ಐಟಿ ಹಿನ್ನಡೆ ಭಾರತದ ಸಾಫ್ಟ್‌ವೇರ್‌ ಉದ್ದಿಮೆಗೆ ಹಾಗೂ ಒಟ್ಟಾರೆ ಐಟಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟೇನೂ ಕೊಟ್ಟಿಲ್ಲ ಎಂದು ಇನ್ಫೋಸಿಸ್‌ ನಾರಾಯಣ ಮೂರ್ತಿ, ವಿಪ್ರೋ ಅಜೀಂ ಪ್ರೇಂಜಿ ಅಂಥವರೇ ಹೇಳಿದ್ದಾರೆ. ಆದರೆ ಕಂಪ್ಯೂಟರ್‌ ಶಿಕ್ಷಣದ ನೆರವಿಗೆ ಇವರ ಮಾತುಗಳು ಬಂದಿಲ್ಲ ಎನ್ನುವುದು ವಾಸ್ತವದ ಸಂಗತಿ. ಜನ ಪ್ರಜ್ಞೆ ಜಾಗತಿಕ ಸೊಲ್ಲಿನಿಂದ ಎಚ್ಚೆತ್ತುಕೊಳ್ಳುತ್ತದೆ. ಅಮೆರಿಕೆಯಲ್ಲಿ ಬೊಗಸೆ ತುಂಬಾ ಸಂಬಳ ಪಡೆಯುವವರದ್ದೇ ಮರಳಿ ಮನೆಗೆ ಅನ್ನುವಂಥಾ ಸ್ಥಿತಿಯಾದರೆ, ತಮ್ಮ ಮಕ್ಕಳು ಕಂಪ್ಯೂಟರ್‌ ಕಲಿತರೆ ಮುಂದೇನು ಅನ್ನುವ ಬಿಲಿಯನ್‌ ಡಾಲರ್‌ ಪ್ರಶ್ನೆ ಹುಟ್ಟಿಕೊಂಡಿದೆ. ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದು ಇದರಿಂದಲೇ ಎನ್ನುತ್ತಾರೆ ಎನ್‌ಐಐಟಿ ಅಧ್ಯಕ್ಷ ರಾಜೇಂದ್ರ ಎಸ್‌.ಪವಾರ್‌.

ಬಂದೇ ಬರತಾವ ಕಾಲ, ಕೊಂಚ ತಡವಾಗಿ : ಎಲ್ಲರಿಗೂ ಆಗಿರುವ ಸ್ಥಿತಿ ನಮಗೂ ಆಗಿದೆ. ಮುಂದೆ ಒಳ್ಳೆ ಕಾಲ ಬಂದೇ ಬರುತ್ತದೆ ಇನ್ನುವ ನಂಬುಗೆ ಆಪ್‌ಟೆಕ್‌ ಅಧ್ಯಕ್ಷ ಅತುಲ್‌ ನಿಶಾರ್‌ ಅವರದು. ಆದರೆ ಇವರ ಆಶಾವಾದ ಹಕೀಕತ್ತಾಗುವ ಕಾಲ ಬಲು ದೂರ ಎಂದು ಐಟಿ ಸಂಶೋಧನಾ ತಜ್ಞ ಸೋಹಿನಿ ಅಂದೋರಿ ಅವರ ಈ ಮಾತುಗಳು ಸ್ಪಷ್ಟಪಡಿಸುತ್ತವೆ - ತಾಂತ್ರಿಕ ಪರಿಣತರನ್ನಾಗಿ ರೂಪಿಸುವಂಥಾ ಸಮಗ್ರ ಕೋರ್ಸುಗಳಿಗೆ ಕನಿಷ್ಠ 40 ಸಾವಿರ ರುಪಾಯಿ (ವರ್ಷಕ್ಕೆ) ತೆರಬೇಕಾಗುತ್ತದೆ. ಐದಂಕಿ ಸಂಬಳ ಪಡೆಯುವವರಿಗೂ ಈ ಮೊತ್ತ ಪಾವತಿಸುವುದು ಕಷ್ಟ. ಜೊತೆಗೀಗ ಐಟಿ ಸ್ಲೌಡೋನ್‌, ಲೇ ಆಫ್‌ ಎಂಬ ಬಿಸಿ ಬಿಸಿ ಸುದ್ದಿ. ಈ ವಿತ್ತ ವರ್ಷದ ಕೊನೇ ತ್ರೆೃಮಾಸಿಕದವರೆಗೆ ಕಂಪ್ಯೂಟರ್‌ ಕಲಿಕಾ ಕೇಂದ್ರಗಳಿಗೆ ಶನಿಗಾಲ. ಆಮೇಲೆ ಪರಿಸ್ಥಿತಿ ಸುಧಾರಿಸಬಹುದು.

ಕಂಪ್ಯೂಟರ್‌ ಕಲಿಕೆಗೆ ನಾ ಒಲ್ಲೆ ಅನ್ನುವ ಸೊಲ್ಲು ಅತಿಯಾಗೇನೂ ಇಲ್ಲ. ವಿದ್ಯಾರ್ಥಿಗಳು ಕಾದು ನೋಡೋಣ ಎಂಬ ಧೋರಣೆ ತಳೆದಿದ್ದಾರೆ, ಅಷ್ಟೆ. ಕಳೆದೆರಡು ತಿಂಗಳಲ್ಲಿ ಕೋರ್ಸುಗಳಿಗೆ ಸೇರಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಪರವಾಗಿಲ್ಲ ಅನ್ನುವಂಥ ಏರಿಕೆಯಾಗಿದೆ. ಬಂದೇ ಬರತಾವ ಕಾಲ. ನಾವೇನೂ ಬಾಗಿಲು ಮುಚ್ಚಿಕೊಂಡು ಹೋಗಲ್ಲ ಎನ್ನುತ್ತಾರೆ ಎಸ್‌ಎಸ್‌ಐನ ಮುಖ್ಯಸ್ಥ ಬಿ.ಜಿ.ಮೆನನ್‌.

ಒಟ್ಟಿನಲ್ಲಿ ಐಟಿ ಕಲಿಕಾ ಕೇಂದ್ರಗಳಿಗೆ ಈ ಹೊತ್ತು ನೊಣ ಹೊಡೆಯುವ ದುಸ್ಥಿತಿ. ಇನ್ನು ಕೆಲವರು ಅಂಗಡಿ ಮುಚ್ಚಿಕೊಂಡು ಹೋಗಿದ್ದಾರೆ. ಮುಂದೇನು ಎಂದು ಕಾದು ನೋಡಬೇಕಷ್ಟೆ. ಐಟಿ ಸ್ಲೋಡೌನು ಕಂಪ್ಯೂಟರ್‌ ಕಲಿಕಾ ಕೇಂದ್ರಗಳಿಗೆ ದೊಡ್ಡ ಹೊಡೆತ ಅನ್ನುವುದನ್ನು ನೀವು ಒಪ್ಪುವಿರಾ?

(ಏಜೆನ್ಸೀಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X