ಆ.9ರಿಂದ ಸಾರ್ಕ್ ಸಮ್ಮೇಳನ: ಭಾರತ- ಪಾಕ್ ಚರ್ಚೆಗೆ ಜೀವ
ಕೊಲಂಬೊ: ಇಲ್ಲಿ ಆಗಸ್ಟ್ 9 ರಿಂದ ನಡೆಯುವ ಸಾರ್ಕ್ ಸಮ್ಮೇಳನದ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳು ಭೇಟಿಯಾಗಲಿದ್ದು , ಇದು ಆಗ್ರಾ ಶೃಂಗಸಭೆಯ ನಂತರ ನಡೆಯುತ್ತಿರುವ ಉಭಯ ರಾಷ್ಟ್ರಗಳ ನಡುವಿನ ಉನ್ನತ ಮಟ್ಟದ ಚರ್ಚೆಯಾಗಿದೆ.
ಶ್ರೀಲಂಕಾದ ವಿದೇಶಾಂಗ ಸಚಿವ ಲಕ್ಷ್ಮಣ್ ಕದೀರ್ಗಮರ್ ಅವರು ಸಾರ್ಕ್ ಸಮ್ಮೇಳನದ ಮೂರನೇ ವಿಶೇಷ ಅಧಿವೇಶನವನ್ನು ಆಗಸ್ಟ್ 9 ರಂದು ಉದ್ಘಾಟಿಸುವರು. ಸಾರ್ಕ್ ರಾಷ್ಟ್ರಗಳ ಎಲ್ಲ 7 ವಿದೇಶಾಂಗ ಕಾರ್ಯದರ್ಶಿಗಳು ಎರಡು ದಿನಗಳ ಈ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ಕೊಲಂಬೊದಲ್ಲಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.
ಸಾರ್ಕ್ ಸಮ್ಮೇಳನವು ಆಗ್ರಾ ಶೃಂಗಸಭೆಯ ನಂತರದ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಮಾತುಕತೆಗಳ ಮುಂದುವರಿಕೆಗೆ ವೇದಿಕೆಯನ್ನು ಕಲ್ಪಿಸಿದೆ. ಭಾರತ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಾರ್ಯದರ್ಶಿ ಚೋಕಿಲಾ ಅಯ್ಯರ್ ವಹಿಸಿದರೆ, ಪಾಕ್ ನಿಯೋಗದ ಮುಂದಾಳಾಗಿ ಇನಾಮುಲ್ ಹಕ್ ಮಾತುಕತೆಯಲ್ಲಿ ಭಾಗವಹಿಸುವರು.
(ಯುಎನ್ಐ)