ಉತ್ತರ ಕರ್ನಾಟಕಕ್ಕೆ ಮಳೆ ದೇವರು ಬಂದಿದ್ದಾರೆ!ತಂಪು ತಂದಿದ್ದಾರೆ
ಧಾರವಾಡ : ಉತ್ತರ ಕರ್ನಾಟಕಕ್ಕೆ ಮಳೆ ಭಾಗ್ಯ ದೊರೆತಿದೆ. ಕಳೆದೆರಡು ದಿನಗಳಿಂದ ಹುಬ್ಬಳ್ಳಿ ಧಾರವಾಡ ಸೇರಿದಂತೆ ಬೀದರ್, ಬಿಜಾಪುರ ಮತ್ತು ಗುಲ್ಬರ್ಗದಲ್ಲಿ ಕಾದ ಮಣ್ಣು ಹಸಿಯಾಗಿದೆ. ಬಿತ್ತನೆ ಕಾರ್ಯಕ್ಕೆ ರೈತ ನೊಗ ನೇಗಿಲನ್ನು ಹೊರತೆಗೆದಿದ್ದಾನೆ.
ಹುಬ್ಬಳ್ಳಿ ಧಾರವಾಡದ ಎಲ್ಲ ತಾಲ್ಲೂಕುಗಳು 20 ಮಿಮೀಗಿಂತ ಹೆಚ್ಚು ಮಳೆಯನ್ನು ಬರಮಾಡಿಕೊಂಡಿದೆ. ಕಳೆದ ವಾರದ ಕೊನೇ ದಿನಗಳಲ್ಲಿ ಬಂದ ಮಳೆಯಿಂದಾಗಿ ಮುಂಗಾರು ಬೆಳೆ ಕೈಕೊಟ್ಟ ದುಗುಡ ಕಡಿಮಯಾಗಿದೆ. ಮೆಣಸಿನ ಬೆಳೆಗೆ ಈ ಮಳೆ ಅನುಕೂಲಕರವಾದ್ದು ಎಂದು ಕೃಷಿ ಇಲಾಖೆಯವರು ಖುಷಿ ಪಡುತ್ತಾರೆ. ಶ್ರಾವಣದಲ್ಲಿ ಒಂದು ಸಾರಿಯಾದರೂ ಮಳೆ ಬೀಳಬೇಕೆಂಬ ನಂಬಿಕೆ ಇಲ್ಲಿನ ರೈತರಲ್ಲಿದ್ದು. ಮಳೆ ದೇವರು ಆ ನಂಬಿಕೆ ಉಳಿಸಿಕೊಂಡಿದ್ದಾರೆ.
ಊರಿಗೇ ಹಬ್ಬ
ಕಲಘಟಗಿ, ಹುಬ್ಬಳ್ಳಿ, ನವಲಗುಂದ, ಮತ್ತು ಧಾರವಾಡದಲ್ಲಿ ಬಿತ್ತಿರುವ ಬೀಜಗಳು ಮೊಳಕೆಯಾಡೆಯುತ್ತಿವೆ. ಕುಂದಗೋಳದಲ್ಲಿ ಮೆಣಸಿನ ನಾಟಿ ಆರಂಭವಾಗಿದೆ. ನಿರ್ಜನವಾಗಿದ್ದ ಹೊಲ ಗದ್ದೆಗಳಲ್ಲಿ ಎತ್ತಿನ ಗಂಟೆ ಸದ್ದು, ರೈತರಸಂಭ್ರಮದ ಜೋರು ಮಾತುಗಳು ಊರಿಗೇ ಹಬ್ಬ ತಂದ ಹಾಗಾಗಿದೆ.
ಇಷ್ಟೆಲ್ಲ ಆದರೂ, ಈಗ ಬಿದ್ದಿರುವ ಮಳೆ ಅತ್ತ ಹಿಂಗಾರೂ, ಅಲ್ಲ ಇತ್ತ ಮುಂಗಾರೂ, ಅಲ್ಲ. ಹಿಂಗಾರು ಬೆಳೆ ತೆಗೆಯುವ ರೈತನಿಗೆ ಈ ಮಳೆ ಹೀಗೇ ಬರುತ್ತದೆ ಎಂಬ ಬಗ್ಗೆ ಅಪನಂಬಿಕೆ ಮೂಡಿಸಿದೆ. ಬೀದರ, ಗುಲ್ಬರ್ಗಾ ಮತ್ತು ಬಿಜಾಪುರಗಳಲ್ಲಿಯೂ ಆಶ್ಲೇಷಾ ಮಳೆ ಬಿದ್ದ ವರದಿಯಾಗಿದೆ. ಬಿಜಾಪುರದಲ್ಲಿ ಕಳೆದೆರಡು ದಿನಗಳಿಂದ ಒನಕೆ ಧಾರೆ ಬಿದ್ದಿದೆ. ಸಿಂದಗಿ ತಾಲ್ಲೂಕಿನಲ್ಲಿ ಗರಿಷ್ಟ ಅಂದರೆ 71.9 ಮಿಮೀ ಮಳೆಯಾಗಿದೆ. ಬರಕ್ಕೆ ತುತ್ತಾಗಿ ಭೂಮಿ ಸೀಳ್ಬಿಟ್ಟಿದ್ದ ಅಥಣಿ, ರಾಯಬಾಗ್ ನೆಲ ತಂಪಾಗಿದೆ. ಗದಗದಲ್ಲಿಯೂ ರಸ್ತೆ, ಚರಂಡಿಗಳಲ್ಲಿ ನೀರು ಹರಿದು ಹೋಗುವಷ್ಟು ಮಳೆ ಬಂದಿದೆ.
ಮಳೆ, ರೈತರ ಕಣ್ಣು ಮಾತ್ರವಲ್ಲ, ಜನಸಾಮಾನ್ಯರ ಕಣ್ಣಲ್ಲೂ ಹೊಳಪು ತಂದಿದೆ. ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆದರೂ, ಒಂದು ಕೊಡಪಾನ ನೀರು ಸಿಗುವ ಭರವಸೆಯಿಲ್ಲದ ಊರಿಗೆ ಮಳೆಗಾಲ ಬಂದಿದೆ. ಬಂದ ಮಳೆ ಎಲ್ಲ ಮನೆ ಮಂದಿಗೆ ತುತ್ತು ಸಿಗುವ ಹಾಗೆ ಕೃಪೆ ಮಾಡಲಿ !
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...