ಕುಕ್ಕರಹಳ್ಳಿ ಕೆರೆಯಲ್ಲಿ ಸತ್ತದ್ದು 1ಲಕ್ಷ ಮೀನು,ನಷ್ಟ ಅಂದಾಜು 3ಲಕ್ಷರೂ.
ಮೈಸೂರು : ಕುಕ್ಕರ ಹಳ್ಳಿ ಕೆರೆ ನೀರು ಕಲುಷಿತಗೊಂಡುದರ ಪರಿಣಾಮವಾಗಿ ಸತ್ತಿರುವ ಮೀನುಗಳ ಸಂಖ್ಯೆ ಒಂದು ಲಕ್ಷ ದಾಟಿದ್ದು ಸುಮಾರು 3 ಲಕ್ಷಕ್ಕೂ ಹೆಚ್ಚು ರೂಪಾಯಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಮೀನುಗಾರರು ಸಾಧ್ಯವಿದ್ದಷ್ಟು, ಸತ್ತ ಮೀನುಗಳನ್ನು ಕೆರೆಯಿಂದ ಹೊರ ತೆಗೆಯಲು ಹೆಣಗಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಎಣ್ಣೆ ಹೊಳೆ ಕೆರೆಯ ನೀರು ಕಲುಷಿತಗೊಂಡಾಗ ಮೂರು ಲಕ್ಷ ಮೀನುಗಳು ಸತ್ತಿದ್ದು ಈಗ ಕಲುಷಿತಗೊಳ್ಳುವ ಸರದಿ ಪ್ರಸಿದ್ಧ ಕುಕ್ಕರ ಹಳ್ಳಿ ಕೆರೆಯದ್ದಾಗಿದೆ.
ಕೆರೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ಕೆರೆಯಲ್ಲಿ ಆಗಿರುವ ಅನಾಹುತವನ್ನು ಸರಿಪಡಿಸಲು ಸರಕಾರ ಕೂಡ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಈ ಬಗ್ಗೆ ಮೀನುಗಾರಿಕಾ ವಿಭಾಗವನ್ನು ಪ್ರಶ್ನಿಸಿದಲ್ಲಿ ಕರ್ನಾಟಕ ಮೀನುಗಾರರ ಸಹಕಾರ ಮಂಡಳಿ (ಕೆಸಿಎಫ್ಎಫ್) ಕೆರೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದೆ ಎಂಬ ಉತ್ತರ ಬರುತ್ತದೆ.
ಕೆಸಿಎಫ್ಎಫ್ನ ಹಿರಿಯ ಅಧಿಕಾರಿಯಾಬ್ಬರ ಪ್ರಕಾರ ಕಳೆದ 15 ದಿನಗಳ ಹಿಂದೆಯಷ್ಟೇ ವಿವಿಧ ಜಾತಿಯ ಮರಿ ಮೀನುಗಳನ್ನು ಕೆರೆಗೆ ಬಿಡಲಾಗಿತ್ತು. ಅಲ್ಲದೆ ನೀರಿನಲ್ಲಿ ಸಾಕಷ್ಟು ಆಮ್ಲಜನಕವಿಲ್ಲದ ಕಾರಣ ಮೀನುಗಳು ಸತ್ತುಹೋಗಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಶಾಖೆಯಲ್ಲಿ ನೀರಿನ ಮಾಲಿನ್ಯ ಅಳೆಯುವ ಯಾವುದೇ ಸೌಲಭ್ಯಗಳಿಲ್ಲವಾದ್ದರಿಂದ ಹೆಚ್ಚು ಮೀನುಗಳ ಸಾವನ್ನು ತಡೆಗಟ್ಟುವುದು ಕಷ್ಟವಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಇಂತಹ ಸಂದರ್ಭದಲ್ಲಿ ನೀರಿನ ಪರೀಕ್ಷೆಗಾಗಿ ಅದು ಸಿಎಫ್ ಟಿಆರ್ಐಯನ್ನು ಅವಲಂಭಿಸುತ್ತದೆ.
ಕೆರೆಯ ಮಾಲಿನ್ಯಕ್ಕೆ ಸುತ್ತ ಮುತ್ತಲಿನ ನಿವಾಸಿಗಳೇ ಕಾರಣ ಎಂದು ಮೈಸೂರು ವಿಶ್ವ ವಿದ್ಯಾಲಯ ದೂರಿದ್ದರೂ ಮೀನುಗಾರರ ಸಹಕಾರ ಮಂಡಳಿಯ ಜೊತೆಗೆ ಕೆರೆ ಮಾಲಿನ್ಯ ನಿಯಂತ್ರಣವನ್ನು ಕೈಗೆತ್ತಿಕೊಳ್ಳುವುದಾಗಿ ವಿವಿಯ ಆಡಳಿತ ಮಂಡಳಿ ಭರವಸೆ ನೀಡಿದೆ.
(ಇನ್ಫೋ ವಾರ್ತೆ)