ಬೆಂಗಳೂರು ಉದ್ಯಮಿಯ ಅಪಹರಣ ಒಂದು ನಾಟಕ ಅಂತಾರೆ ಪೊಲೀಸರು
ಬೆಂಗಳೂರು : ಬೆಂಗಳೂರಿನ ಉದ್ಯಮಿ ಶಾಂತಿನಾಥ್ ಅಪಹರಣ ಹಾಗೂ 25 ಲಕ್ಷ ರುಪಾಯಿ ಒತ್ತೆಹಣ ಬೇಡಿಕೆ ಪ್ರಕರಣ ಒಂದು ನಾಟಕ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಲಕ್ಷಾಂತರ ರುಪಾಯಿ ಸಾಲ ಮಾಡಿದ್ದ ಉದ್ಯಮಿ, ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಈ ಅಪಹರಣದ ನಾಟಕ ಆಡಿಸಿದ್ದಾರೆ ಎನ್ನುತ್ತಾರೆ. ಈ ಮಧ್ಯೆ ನಾಟಕೀಯ ರೀತಿಯಲ್ಲಿ ಉದ್ಯಮಿಯ ಬಿಡುಗಡೆಯೂ ಆಗಿದೆ.
ಬೇರೆ ಬೇರೆ ಫೈನಾನ್ಸ್ ಕಂಪನಿಗಳಿಂದ ಸುಮಾರು 25 ರಿಂದ 50 ಲಕ್ಷ ರುಪಾಯಿವರೆಗೆ ಸಾಲ ಮಾಡಿರುವ ನಾಗರಬಾವಿಯ ಪಯೋನಿರ್ ಪ್ರೌಢಶಾಲೆಯ ಮುಖ್ಯಸ್ಥ ಜಿ.ಆರ್. ಶಾಂತಿನಾಥ್ (45) ಸಾಲಗಾರರಿಂದ ತಪ್ಪಿಸಿಕೊಳ್ಳಲು, ಅಪಹರಣ ನಾಟಕ ಸೃಷ್ಟಿಸಿ, ಪತ್ನಿಯಿಂದ ಅಪಹರಣದ ಮೊಕದ್ದಮೆ ದಾಖಲಿಸುವ ನಾಟಕ ಆಡಿರಬಹುದೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿನಾಥ್ ಅವರು, ತಮ್ಮ ಗೆಳೆಯ ಬಸವರಾಜ್ ಅವರಿಂದ ಸಾಕಷ್ಟು ಸಾಲ ಪಡೆದಿದ್ದು, ಅವರಿಂದ ತಪ್ಪಿಸಿಕೊಳ್ಳಲೆಂದೇ ಈ ನಾಟಕ ಆಡಿಸಿದ್ದಾರೆಂಬುದು ಪೊಲೀಸರ ಬಲವಾದ ಶಂಕೆ. ಈ ಮಧ್ಯೆ ಶಾಂತಿನಾಥ್ ಅವರನ್ನು ಅಪಹರಣಕಾರರು ತಮಿಳುನಾಡಿನ ಕೊಯಮತ್ತೂರು ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ತಮ್ಮನ್ನು ಕರೆದೊಯ್ಯುತ್ತಿದ್ದ ಕಾರಿಗೂ, ಲಾರಿಗೂ ಡಿಕ್ಕಿಯಾಗಿದ್ದರಿಂದ ಅಪಹರಣಕಾರರು ತಮ್ಮನ್ನು ಕಾರಿನಿಂದ ಇಳಿಸಿ, ಪರಾರಿಯಾದರು ಎಂದು ಶಾಂತಿನಾಥ್ ತಿಳಿಸಿರುವುದಾಗಿ ವರದಿಯಾಗಿದೆ. ಆದರೆ, ಇದೊಂದು ನಾಟಕ ಎನ್ನುವ ನಗರ ಪೊಲೀಸರು, ಶಾಂತಿನಾಥ್ ಬೆಂಗಳೂರಿಗೆ ಬಂದ ನಂತರ ನಿಜ ಬಯಲಾಗುತ್ತದೆ ಎನ್ನುತ್ತಾರೆ.
ಈಗ ಶಾಂತಿನಾಥ್ ಸೇಲಂ ಜಿಲ್ಲೆಯ ವಲ್ಲಂಪೆಟ್ಟಿ ಪೊಲೀಸ್ ಠಾಣೆಯಲ್ಲಿದ್ದು, ಬೆಂಗಳೂರು ಪೊಲೀಸರು ಹಾಗೂ ಅವರ ಮನೆಯವರು, ಶಾಂತಿನಾಥ್ರನ್ನು ಬೆಂಗಳೂರಿಗೆ ಕರೆತರಲು ಅಲ್ಲಿಗೆ ತೆರಳಿದ್ದಾರೆ. ಕೆಂಗೇರಿಗೇಟ್ ಎಸಿಪಿ ಶ್ರೀಧರಮೂರ್ತಿ, ಚಂದ್ರಲೇಔಟ್ ಇನ್ಸ್ಪೆಕ್ಟರ್ ಟಿ.ಡಿ. ದುರ್ಗಯ್ಯ ತನಿಖೆ ನಡೆಸುತ್ತಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...