ತಮಿಳುನಾಡು ಅಗ್ನಿ ಆಕಸ್ಮಿಕ: 25 ಮಾನಸಿಕ ಅಸ್ವಸ್ಥರ ಜೀವಂತ ದಹನ
ರಾಮನಾಥಪುರಂ : ಇಲ್ಲಿಗೆ ಸಮೀಪದ ಈರ್ವಾಡಿ ದರ್ಗಾದ ಬಳಿಯ ಮಾನಸಿಕ ಅಸ್ವಸ್ಥರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿರುವ ಬೆಂಕಿ ಆಕಸ್ಮಿಕದಲ್ಲಿ ಕನಿಷ್ಠ 25 ಮಂದಿ ಮಾನಸಿಕ ಅಸ್ವಸ್ಥ ರು ಜೀವಂತ ಸುಟ್ಟು ಹೋಗಿದ್ದಾರೆ. ಕಬ್ಬಿಣದ ಸರಪಳಿಗಳಲ್ಲಿ ಬಂಧಿಸಿದ್ದರಿಂದ ಅವರುಗಳು ಬೆಂಕಿಯಿಂದ ಪಾರಾಗಲು ಸಾಧ್ಯವಾಗಿಲ್ಲ . ದೇಹಗಳು ಗುರುತು ಸಿಗದಷ್ಟು ಕರಕಲಾಗಿರುವುದರಿಂದ ಸತ್ತವರನ್ನು ಗುರ್ತಿಸಲಾಗಿಲ್ಲ .
ಬೆಂಕಿ ಹತ್ತಿಕೊಂಡು ಸುಟ್ಟುಹೋಗುತ್ತಿರುವಾಗ ಮಾನಸಿಕ ಅಸ್ವಸ್ಥರು ಚೀರಿದರೂ, ಸ್ಥಳೀಯ ನಿವಾಸಿಗಳು ಅದು ಮಾನಸಿಕ ಅಸ್ವಸ್ಥರ ಮಾಮೂಲಿನ ಚಟುವಟಿಕೆ ಎಂದು ನತದೃಷ್ಟರ ನೆರವಿಗೆ ತಕ್ಷಣ ಒದಗಿ ಬಂದಿಲ್ಲ . ಇದರಿಂದಾಗಿ ಬೆಂಕಿ ಉಲ್ಬಣಿಸಿದ್ದು ಸಾವಿನ ಸಂಖ್ಯೆ ಹೆಚ್ಚಿದೆ. ಆಶ್ರಯ ಧಾಮದಲ್ಲಿ ಸುಮಾರು 40 ಮಾನಸಿಕ ಅಸ್ವಸ್ಥರಿಗೆ ಆಶ್ರಯ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವ ಹೊತ್ತಿಗಾಗಲೇ ಬಹಳಷ್ಟು ರೋಗಿಗಳನ್ನು ಬೆಂಕಿ ಆಹುತಿ ತೆಗೆದುಕೊಂಡಿತ್ತು . ದೀಪವೊಂದು ಉರುಳಿಬಿದ್ದುದೇ ಬೆಂಕಿಗೆ ಕಾರಣವೆಂದು ಊಹಿಸಲಾಗಿದೆ. ಮರ ಮುಟ್ಟುಗಳನ್ನು ಹೆಚ್ಚಾಗಿ ಬಳಸಿ ನಿರ್ಮಿಸಲಾಗಿದ್ದ ಕಟ್ಟಡಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 2 ಗಂಟೆಗಳ ಕಾಲ ಬೆವರು ಹರಿಸಿತು.
ಖಾಸಗಿ ಒಡೆತನಕ್ಕೆ ಸೇರಿರುವ ಈ ಆಶ್ರಯಧಾಮದ ಸುತ್ತಮುತ್ತಲಿನಲ್ಲೇ ಇತರ 15 ಮಾನಸಿಕ ಸಂತ್ರಸ್ತರ ಆಶ್ರಯ ತಾಣಗಳಿದ್ದು , ಅವುಗಳಲ್ಲಿ ಸಾವಿರಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರು ಆಶ್ರಯ ಪಡೆದಿದ್ದಾರೆ. ಈ ಆಶ್ರಯತಾಣಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಅಮಾನವೀಯವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಈ ಮುನ್ನ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಘಟನೆ ಬಗೆಗೆ ಹೆಚ್ಚಿನ ತನಿಖೆಗೆ ತಮಿಳುನಾಡು ಸರ್ಕಾರ ಆದೇಶಿಸಿದ್ದು , ಪರಿಹಾರ ಕಾರ್ಯಗಳು ನಡೆಯುತ್ತಿವೆ.