ನಿಮ್ಮ ಭೂಮಿಯಲ್ಲಿ ಬೆಳೆಸುವ ಶ್ರೀಗಂಧದ ಮರಕ್ಕೆ ನೀವೇ ಒಡೆಯರು
ಬೆಂಗಳೂರು : ಗಂಧದ ಮರಗಳನ್ನು ಖಾಸಗಿ ಜಮೀನಿನಲ್ಲಿ ಬೆಳೆಸುವ ‘ಕರ್ನಾಟಕ ಅರಣ್ಯ ತಿದ್ದುಪಡಿ ವಿಧೇಯಕ’ವನ್ನು ರಾಜ್ಯ ವಿಧಾನಸಭೆ ಶನಿವಾರ ಸರ್ವಾನುಮತದಿಂದ ಅಂಗೀಕರಿಸಿತು.
ಗಂಧದ ಮರಗಳನ್ನು ಸಾರ್ವಜನಿಕರು ಬೆಳೆಸಲು ಈ ವಿಧೇಯಕ ಉತ್ತೇಜನ ನೀಡುತ್ತದೆಂದು ನಂಬಲಾಗಿದೆ. ಶ್ರೀಗಂಧದ ತವರು ಎಂದು ಹೆಸರಾದ ಕರ್ನಾಟಕದಲ್ಲಿ ಇತ್ತೀಚೆಗೆ ಗಂಧದ ಕೊರತೆ ಉಂಟಾಗಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ - ಸಾರ್ವಜನಿಕರು ತಮ್ಮ ಸ್ವಂತ ಭೂಮಿಯಲ್ಲಿ ಗಂಧದ ಮರಗಳನ್ನು ಬೆಳೆಸಲು ಇರುವ ನಿರ್ಬಂಧವನ್ನು ರದ್ದು ಪಡಿಸುವುದಾಗಿ ಈ ಮುನ್ನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಭರವಸೆ ನೀಡಿದ್ದರು.
ವಿಧೇಯಕದ ಅಂಗೀಕಾರದಿಂದ ಇನ್ನು ಮುಂದೆ ತಮ್ಮ ಜಮೀನಿನಲ್ಲಿ ಗಂಧದ ಮರಗಳನ್ನು ಬೆಳೆಸುವವರಿಗೆ ಅದರ ಮಾಲೀಕತ್ವ ದೊರಕುತ್ತದೆ. ಆದರೆ, ಗಂಧದ ಮರವನ್ನು ಕಡಿದು ಮಾರಾಟ ಮಾಡುವ ಕೆಲಸವನ್ನು ಸರ್ಕಾರವೇ ವಹಿಸಿಕೊಳ್ಳುತ್ತದೆ. ಸಾರಿಗೆ ವೆಚ್ಚವನ್ನು ಕಡಿದುಕೊಂಡು ಉಳಿದಂತೆ ಸಂಪೂರ್ಣ ಹಣವನ್ನು ಗಂಧದ ಮರವನ್ನು ಬೆಳೆಸಿದವರಿಗೇ ನೀಡಲಾಗುವುದು.
ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಅರಣ್ಯ ಸಚಿವ ಕೆ.ಎಚ್.ರಂಗನಾಥ್ ಅವರು, ಗಂಧದ ಮರ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ ಎಂದರು. ನೂತನ ವಿಧೇಯಕವು ಗಂಧದ ಮರ ಕಡಿಯುವ ಅಪರಾಧಕ್ಕೆ ವಿಧಿಸುವ ಶಿಕ್ಷೆಯನ್ನು 7 ವರ್ಷಗಳಿಂದ 10 ವರ್ಷಗಳಿಗೆ ಹಾಗೂ ದಂಡದ ಮೊತ್ತವನ್ನು 25 ಸಾವಿರ ರುಪಾಯಿಗಳಿಂದ 1 ಲಕ್ಷ ರುಪಾಯಿಗೆ ಹೆಚ್ಚಿಸುವ ಅಂಶಗಳನ್ನು ಒಳಗೊಂಡಿದೆ.
(ಇನ್ಫೋ ವಾರ್ತೆ)