ವಿಶ್ವವಿದ್ಯಾಲಯ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಬೆಂಗಳೂರು : ಶೈಕ್ಷಣಿಕ ಸ್ವಾಯತ್ತತೆ, ಸೆನೆಟ್ ರದ್ದು, ಸಿಂಡಿಕೇಟ್ಗೆ ಚುನಾವಣೆ ಬದಲು ನಾಮಕರಣ, ಕುಲಪತಿಗಳ ನೇಮಕ, ಅಧಿಕಾರಾವಧಿ ವಿಸ್ತರಣೆ ಸೇರಿದಂತೆ ಹಲವು ವಿಷಯಗಳನ್ನೊಳಗೊಂಡ ವಿವಾದಿತ ಕರ್ನಾಟಕ ವಿಶ್ವವಿದ್ಯಾಲಯಗಳ ವಿಧೇಯಕ 2000ಗೆ ಕೆಲವು ತಿದ್ದುಪಡಿಗಳ ಮೂಲಕ ವಿಧಾನಸಭೆ ಅಂಗೀಕರಿಸಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಸಲಹೆಗನುಗುಣವಾಗಿ ಇನ್ನು ಮುಂದೆ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಸೆನೆಟ್ ಇರುವುದಿಲ್ಲ. ಈ ನಿರ್ಧಾರವನ್ನು ಕೈಬಿಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿದಾಗ, ದೇಶದ ಬಹುತೇಕ ವಿ.ವಿ.ಗಳಲ್ಲಿ ಸೆನೆಟ್ ಇಲ್ಲ ಎಂಬ ಸ್ಪಷ್ಟನೆ. ಅಂತಿಮವಾಗಿ ಈ ವಿಧೇಯಕಕ್ಕೆ ಸದನದ ಧ್ವನಿಮತದ ಅಂಗೀಕಾರ.
ಕುಲಪತಿಗಳ ನೇಮಕದ ಅಧಿಕಾರವನ್ನು ರಾಜ್ಯಪಾಲರಿಂದ ಸರಕಾರವೇ ಕಸಿದುಕೊಳ್ಳುವ ವಿವಾದಕ್ಕೆ ಸಂಬಂಧಿಸಿದಂತೆ ಮೂಲ ವಿಧೇಯಕಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. ವಿರೋಧ ಪಕ್ಷದ ಸದಸ್ಯರು ಹಾಗೂ ಜಂಟಿ ಸದನ ಸಮಿತಿ ನೀಡಿದ ಸಲಹೆಯಂತೆ ಶೋಧನಾ ಸಮಿತಿ ಶಿಫಾರಸು ಮಾಡುವ ಮೂವರು ಅರ್ಹ ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಯಾವುದೇ ಬದಲಾವಣೆ ಇಲ್ಲದೆ ರಾಜ್ಯಪಾಲರಿಗೆ ನೀಡಲು ಸಮ್ಮತಿಸಲಾಗಿದೆ.
ಕುಲಪತಿಗಳ ಅಧಿಕಾರದ ಅವಧಿಯನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ಹೆಚ್ಚಿಸಲೂ ಈ ವಿಧೇಯಕ ಅನುಮತಿ ನೀಡಿದೆ. ಆದರೆ, ಯಾವುದೇ ಕುಲಪತಿಯನ್ನು ಎರಡನೇ ಅವಧಿಗೆ ನೇಮಕ ಮಾಡುವಂತಿಲ್ಲ. ವಿ.ವಿ. ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಿಂದ ಅಕಾಡಮಿಕ್ ಕೌನ್ಸಿಲ್ಗೆ ತಲಾ ಒಬ್ಬ ಶಾಸಕರನ್ನು ಹಾಗೂ ವಿಧಾನಪರಿಷತ್ನಿಂದ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡುವುದೂ ಇದರಲ್ಲಿ ಅಡಕವಾಗಿದೆ.
ಅಕಾಡಮಿಕ್ ಕೌನ್ಸಿಲ್ ಸದಸ್ಯರ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ. ಮೌಲ್ಯಮಾಪನ ರಿಜಿಸ್ಟ್ರಾರ್ ನೇಮಕ ಮಾಡುವ ಅಧಿಕಾರವನ್ನು ಅಕಾಡೆಮಿಕ್ ಕೌನ್ಸಿಲ್ಗೆ ನೀಡಲಾಗಿದೆ. ಸ್ಥಳೀಯ ಪರಿಶೀಲನಾ ಸಮಿತಿಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಸದಸ್ಯರೊಬ್ಬರನ್ನು ನೇಮಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಂತೆಯೇ ಉಪನ್ಯಾಸಕರ ಅಂತರ ವಿ.ವಿ. ವರ್ಗಾವಣೆಗೂ ಅವಕಾಶ ಕಲ್ಪಿಸಿದೆ.
ಈ ಎಲ್ಲ ಅಂಶಗಳನ್ನೂ ರಾಜ್ಯದ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ತಿದ್ದುಪಡಿಗಳನ್ನು ತರುವ ಮೂಲಕ ವಿ.ವಿ.ಗಳಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸ್ವಾಯತ್ತತೆ ನೀಡಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಮನೆಪಾಠ ನಿಷೇಧ : ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ ಯು.ಜಿ.ಸಿ.ವೇತನ ನೀಡುತ್ತಿರುವುದರಿಂದ ಖಾಸಗಿ ಮನೆಪಾಠ ನಿಷೇಧಿಸಲಾಗಿದೆ. ಜೊತೆಗೆ ಅವರು ಕಾಲ ಕಾಲಕ್ಕೆ ಪರೀಕ್ಷೆ, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವುದು ಮೊದಲಾದ ಶೈಕ್ಷಣಿಕ ಕೆಲಸಗಳನ್ನು ಕಡ್ಡಾಯ ಮಾಡುವ ಮೂಲಕ ಮೌಲ್ಯಮಾಪನ ಕಾಲದಲ್ಲಿ ಮುಷ್ಕರ ಹೂಡುವ ಪಿಡುಗಿಗೆ ಕಡಿವಾಣ ಹಾಕಲಾಗಿದೆ ಎಂದರು.