ತಾಂತ್ರಿಕ ಹಿನ್ನಡೆ ತಾತ್ಕಾಲಿಕ, ನಾಳೆ ನಮ್ಮದೇ- ಪ್ರಧಾನಿ ವಾಜಪೇಯಿ
ನವದೆಹಲಿ : ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಹಿನ್ನಡೆ ತಾತ್ಕಾಲಿಕವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಇಟ್ಟಿರುವ ನಂಬಿಕೆ ಹುಸಿಯಾಗದು, ಆಗಬಾರದು ಎಂದು ಪ್ರಧಾನಿ ಎ.ಬಿ.ವಾಜಪೇಯಿ ಹೇಳಿದ್ದಾರೆ.
‘ಬೌದ್ಧಿಕ ಸಮಾಜವಾಗಿ ಭಾರತದ ಅಭಿವೃದ್ಧಿ’ ಎಂಬ ವಿಷಯ ಕುರಿತ ಕಾರ್ಯಪಡೆಯಾಂದರ ವರದಿಯನ್ನು ಪ್ರಸ್ತಾಪಿಸಿ ಗುರುವಾರ ಅವರು ಮಾತಾಡುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆಯ ಜೊತೆಗೆ ಆರ್ಥಿಕವಾಗಿ ಮೇಲೆ ಬರಲು ಕೂಡ ತಂತ್ರಜ್ಞಾನವನ್ನು ನಾವು ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಅಳವಡಿಸಬೇಕು ಎಂದರು.
ಮಾನವ ಸಂಪನ್ಮೂಲ ನಮ್ಮ ಅತ್ಯುತ್ತಮ ಸಂಪತ್ತು. ಅದನ್ನು ಅಭಿವೃದ್ಧಿಯ ಪಥದತ್ತ ಸಾಗಿಸುವ ಚಲನ ಶಕ್ತಿಯಾಗಿ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು. ಆಗ ನಮ್ಮ ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆಗಳು ನೀಗುತ್ತವೆ. ಅಭಿವೃದ್ಧಿ ಹೊಂದಿರುವ ಉತ್ತಮ ರಾಷ್ಟ್ರ ಭಾರತ ಎಂದು ಜಗತ್ತು ಮಾತಾಡಿಕೊಳ್ಳುತ್ತದೆ ಎಂದು ಪ್ರಧಾನಿ ಕರೆ ಕೊಟ್ಟರು.
ಮಾಹಿತಿ ತಂತ್ರಜ್ಞಾನದಲ್ಲಿ ದೇಶ ಇಟ್ಟಿರುವ, ಇಡುತ್ತಿರುವ ದೂಪುಗಾಲು ನಮ್ಮ ಕಣ್ಣು ತೆರೆಸಿದೆ. ನಮ್ಮಲ್ಲಿರುವ ಪ್ರಚ್ಛನ್ನ ಶಕ್ತಿಗೆ ಆರ್ಥಿಕ ದಿಕ್ಕು ಒದಗಿಸಿದಲ್ಲಿ ಅಭಿವೃದ್ಧಿ ಕಟ್ಟಿಟ್ಟ ಬುತ್ತಿ ಎಂಬುದು ಸಾಬೀತಾಗಿದೆ. ಜ್ಞಾನಾಧಾರಿತ ಆರ್ಥಿಕತೆಗೆ ಭಾರತ ಪ್ರಸ್ತುತದ ಉತ್ತಮ ಉದಾಹರಣೆ ಎಂಬುದು ನಮ್ಮ ಹೆಮ್ಮೆ ಎಂದು ವಾಜಪೇಯಿ ಶ್ಲಾಘಿಸಿದರು.
(ಪಿಟಿಐ)