ಬಾಲಕಿಗೆ ಡಿಕ್ಕಿ ಹೊಡೆದ ಜಿಲ್ಲಾಧಿಕಾರಿ ಕಾರು, ಕುಷ್ಟಗಿ ಉದ್ವಿಗ್ನ
ಕುಷ್ಟಗಿ : ವೇಗವಾಗಿ ಚಲಿಸುತ್ತಿದ್ದಾಗ ಜಿಲ್ಲಾಧಿಕಾರಿ ಕಾರು ಬಾಲಕಿಯಾಬ್ಬಳಿಗೆ ಡಿಕ್ಕಿ ಹೊಡೆದ ಪರಿಣಾವಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಜಿಲ್ಲಾಧಿಕಾರಿ ಸೇರಿದಂತೆ ಕೇಂದ್ರದ ಬರ ಅಧ್ಯಯನ ತಂಡದ ಇಬ್ಬರು ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಾರಿಗೆ ಅಡ್ಡ ಬಂದಿರುವ ರೇಖಾ ಯಮನಪ್ಪ ಪುರದ ಎನ್ನುವ ಹತ್ತು ವರ್ಷದ ಬಾಲಕಿಯ ತಲೆ ಹಾಗೂ ಎದೆಗೆ ತೀವ್ರ ಪೆಟ್ಟಾಗಿದ್ದು , ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಕೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೇಖಾಳ ಆರೋಗ್ಯ ಸ್ಥಿತಿ ಸುಧಾರಿಸುವವರೆಗೆ ಅಧಿಕಾರಿಗಳನ್ನು ಬಿಡಲಾಗುವುದಿಲ್ಲ ಎಂದು ಗ್ರಾಮಸ್ತರು ಪಟ್ಟು ಹಿಡಿದಿರುವುದರಿಂದ ಹಳ್ಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ರಕ್ಷಣಾ ವ್ಯವಸ್ಥೆಯನ್ನೂ ನಿರ್ಲಕ್ಷಿಸಿ ಗ್ರಾಮದಲ್ಲಿ ಎಲ್ಲ ಅಧಿಕಾರಿಗಳನ್ನೂ ಕೂಡಿ ಹಾಕಲಾಗಿದೆ.
ಘಟನೆಯಲ್ಲಿ 20 ಸರಕಾರಿ ವಾಹನಗಳು ಜಖಂಗೊಂಡಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯಾಚಿತ್ ಮತ್ತು ಜಿಲ್ಲಾಧಿಕಾರಿ ತುಷಾರ ಗಿರಿಧರನಾಥ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಕೇಂದ್ರದ ಅಧಿಕಾರಿಗಳ ತಂಡ ರಾಯಚೂರಿನ ನಂತರ ಕೊಪ್ಪಳ ಜಿಲ್ಲೆ ಪ್ರವಾಸ ಕೈಗೊಂಡಿತ್ತು. ಕುಷ್ಟಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಸಭೆ ನಡೆಸಲು ತಂಡ ಹೊರಟಾಗ ಈ ಅಪಘಾತ ನಡೆಯಿತು.
(ಇನ್ಫೋ ವಾರ್ತೆ)