ವರ್ಷದ ವ್ಯಕ್ತಿಯಾಗಿ ಬಾಲಗಂಗಾಧರನಾಥ ಸ್ವಾಮೀಜಿಗೆ ಸನ್ಮಾನ
ಬೆಂಗಳೂರು : ಸಹೇಲಿಯ ಕೊಳೆಗೇರಿ ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಸಂಘಟನೆಯು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ‘ವರ್ಷದ ವ್ಯಕ್ತಿ ’ ಎಂದು ಗುರುತಿಸಿದೆ.
ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸ್ವಾಮೀಜಿ ಅವರನ್ನು ಸನ್ಮಾನಿಸಲಾಗುವುದು. ರಕ್ಷಾಬಂಧನ ದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲು ಸಂಸ್ಥೆಯು ನಿರ್ಧರಿಸಿದ್ದು, ಆಗಸ್ಟ್ 4ರ ಶನಿವಾರ ಸ್ವಾಮೀಜಿಗಳಿಗೆ ‘ವರ್ಷದ ವ್ಯಕ್ತಿ ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೊತೆಗೆ ಸರಕಾರಿ ಕಾಲೇಜುಗಳಲ್ಲಿ ಓದಿ ಉತ್ತಮ ಅಂಕ ಪಡೆದ ಹತ್ತು ಮಂದಿ ವಿದ್ಯಾರ್ಥಿಗಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಧರ್ಮಗುರು ರಾಮಾನುಜ ಮಠದ ಜಗದ್ಗುರು ಕಿಂಕರ ಭೂದೇವಾನಂದ, ಫಾದರ್ ಜಯನಾಥನ್ ಮತ್ತು ಕಲಾವಿದ ಸಿ.ಆರ್. ಸಿಂಹ ಭಾಗವಹಿಸುವರು.
ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪುಸ್ತಕ ಮತ್ತು ಬಟ್ಟೆಗಳನ್ನು ಸಮಾರಂಭದಲ್ಲಿ ವಿತರಿಸಲಾಗುವುದು. ಅಲ್ಲದೆ ಆಸಕ್ತ ಬಡ ಮಹಿಳೆಯರಿಗೆ ಸ್ವ ಉದ್ಯೋಗ ಉಪಕರಣಗಳನ್ನು ಅಭಿವೃದ್ಧಿ ಸಂಘಟನೆ ವಿತರಿಸಲಿದೆ ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷೆ ಕಿರಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)