ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ : ಲೋಕಸಭೆಯಲ್ಲಿ ವಾಜಪೇಯಿ
ನವದೆಹಲಿ : ಮಂಗಳವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದಿಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು, ಬುಧವಾರ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದಿರುವುದಾಗಿ ಲೋಕಸಭೆಯಲ್ಲಿ ಪ್ರಕಟಿಸಿದರು.
ಪ್ರಧಾನಿ ಹುದ್ದೆಯಿಂದ ತಾವು ಕೆಳಗಿಳಿಯುವುದಾಗಿ ಭಾರತೀಯ ಜನತಾಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಮಂಗಳವಾರ ಪ್ರಕಟಿಸಿದ್ದ ವಾಜಪೇಯಿ ಅವರ ನಿರ್ಧಾರದ ಬಗ್ಗೆ ಪ್ರತಿಪಕ್ಷಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ತಾವು ಎನ್.ಡಿ.ಎ.ಯನ್ನು ಮುನ್ನಡೆಸುವುದಾಗಿ ತಿಳಿಸಿದರು.
ಮಂಗಳವಾರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ನಡೆದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಸಭೆ, ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸವನ್ನು ವ್ಯಕ್ತಪಡಿಸಿ, ಒಕ್ಕೂಟದ ನೇತೃತ್ವ ವಹಿಸಲು ವಾಜಪೇಯಿ ಸಮರ್ಥ ನಾಯಕರು ಎಂದು ಅಭಿಪ್ರಾಯ ಪಟ್ಟಿತ್ತು.
ವಿಷಾದ : ತಮ್ಮ ರಾಜೀನಾಮೆ ನಿರ್ಧಾರವನ್ನು ಸಂಸತ್ತಿನ ಹೊರಗೆ ಪ್ರಕಟಿಸಿದ ಬಗ್ಗೆ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ತಮಗೆ ಸಂಸತ್ತಿನ ಸದಸ್ಯರಿಗೆ ನೋವು ಉಂಟುಮಾಡುವಂತಹ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದರು.
ತಾವು ಎನ್.ಡಿ.ಎ. ನಾಯಕತ್ವದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದು ನಿಜ, ಆದರೆ, ಪ್ರಜಾಸತ್ತಾತ್ಮಕ ಒಕ್ಕೂಟ ತಮ್ಮ ಈ ನಿರ್ಧಾರವನ್ನು ಒಪ್ಪಲಿಲ್ಲ ಎಂದು ಲೋಕಸಭೆಗೆ ತಿಳಿಸಿದರು. ಇದಕ್ಕೂ ಮುನ್ನ ಪ್ರತಿಪಕ್ಷ ಸದಸ್ಯರು ಇಡೀ ಪ್ರಕರಣದ ಸಂಬಂಧ ಪ್ರಧಾನಿಯವರಿಂದ ವಿವರಣೆಯನ್ನು ಬಯಸಿದ್ದರು.
(ಯು.ಎನ್.ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...