ಅತಿ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ನಗರ ಪ್ರವೇಶ ನಿಷೇಧ
ಬೆಂಗಳೂರು : ವಾಯು ಮಾಲಿನ್ಯವನ್ನು ತಡೆಗಟ್ಟಲು 15 ವರ್ಷ ಹಳೆಯದಾದ ವಾಹನಗಳನ್ನು ಸಂಚಾರಕ್ಕೆ ಯೋಗ್ಯವಲ್ಲ ಎಂದು ಪರಿಗಣಿಸಿ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಕೆ.ಎಚ್. ರಂಗನಾಥ್ ಪ್ರಕಟಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸಲು ವಾಹನಗಳಿಗೆ ಇಂತಿಷ್ಟು ಆಯಸ್ಸು ಎಂದು ನಿಗದಿಪಡಿಸುವುದು ಅನಿವಾರ್ಯವಾಗಿದೆ ಎಂದು ಅವರು ಭಾರತೀಯ ಜನತಾ ಪಕ್ಷದ ಶಾಸಕ ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದರು.
ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟಲು ವಾಹನಗಳಿಗೆ ಸಿಎನ್ಜಿ ಅನಿಲ ಜೋಡಣಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯ ವ್ಯವಸ್ಥೆಯನ್ನು ಬೆಂಗಳೂರಿನಲ್ಲೇಕೆ ಜಾರಿಗೆ ತರಬಾರದು ಎಂದು ಬಿ.ಜೆ.ಪಿ.ಯ ಸುರೇಶ್ ಕುಮಾರ್ ಪ್ರಶ್ನಿಸಿದರು. ಈ ವ್ಯವಸ್ಥೆಗೆ ಬೆಂಗಳೂರಲ್ಲಿ ಅನುಕೂಲಕರ ವಾತಾವರಣ ಇಲ್ಲ ಎಂದು ಸಚಿವರು ಉತ್ತರಿಸಿದರು.
ನಗರದಲ್ಲಿ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಹೆಚ್ಚು ಹೊಗೆ ಉಗುಳುವ ವಾಹನಗಳನ್ನು ಹಿಡಿದು, ತಪಾಸಣೆ ಮಾಡಿ, ಮಾಲಿಕರ ವಿರುದ್ಧ ಕ್ರಮ ಜರುಗಿಸಲಾಗಿದೆ. ನಗರದ 5 ಪ್ರಮುಖ ಚೆಕ್ಪೋಸ್ಟ್ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಹೊರಸೂಸುವ ವಾಹನಗಳಿಗೆ ನಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಾಲಿನ್ಯ ಉಂಟು ಮಾಡುವ ಸರಕಾರಿ ವಾಹನಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ 375 ಸರಕಾರಿ ವಾಹನಗಳನ್ನು ಪರೀಕ್ಷಿಸಿ, 55 ವಾಹನಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದರು.
ಒಟ್ಟು 5527 ಖಾಸಗಿ ವಾಹನಗಳನ್ನು ವಾಯು ಮಾಲಿನ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಅತಿ ಹೆಚ್ಚು ಹೊಗೆ ಉಗುಳುತ್ತಿದ್ದ 647 ವಾಹನ ಮಾಲಿಕರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಹಾಗೂ 3,77,290 ರು. ದಂಡ ವಸೂಲಿ ಮಾಡಲಾಗಿದೆ ಎಂಬ ಅಂಕಿ ಅಂಶಗಳನ್ನು ರಂಗನಾಥ್ ವಿಧಾನಸಭೆಗೆ ನೀಡಿದರು.