ಹೈಟೆಕ್ನಿಂದ ಆಧ್ಯಾತ್ಮದತ್ತ ಆಂಧ್ರದ ಚಂದ್ರಬಾಬು ನಾಯ್ಡು
ಹೈದರಾಬಾದ್: ಐಟಿ ಆಂದೋಲನದಲ್ಲಿ ದೇಶದ ಸಿಲಿಕಾನ್ ವ್ಯಾಲಿ ಜೊತೆ ತೀವ್ರ ಸ್ಪರ್ಧೆಯಲ್ಲಿದ್ದ ಆಂಧ್ರಪ್ರದೇಶದಲ್ಲಿ ಈಗ ಆಧ್ಯಾತ್ಮ ಆಂದೋಲನ.
ರಾಜ್ಯದ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಹಾಗೂ ಇತರ ಸರಕಾರಿ ನೌಕರರಿಗೆ ಯೋಗ ಮತ್ತು ಧ್ಯಾನದ ತರಬೇತಿಯನ್ನು ಕಡ್ಡಾಯಗೊಳಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ಧರಿಸಿದ್ದಾರೆ. ಯೋಗ ಮತ್ತು ಧ್ಯಾನ ತರಬೇತಿಯಿಂದ ಉತ್ತಮ ಆಡಳಿತ ಒದಗಿಸಲು ಸಾಧ್ಯ ಎಂದು ಚಂದ್ರಬಾಬು ನಾಯ್ಡು ಬಲವಾಗಿ ನಂಬಿರುವುದೇ ಈ ಹೊಸ ಅಭಿಯಾನಕ್ಕೆ ಕಾರಣವಂತೆ.
ಈಗಾಗಲೇ ‘ಡಾ. ಎಂ.ಸಿ.ಆರ್. ಮಾನವಸಂಪನ್ಮೂಲ ಸಂಸ್ಥೆ’ಯಲ್ಲಿ 67.70 ಲಕ್ಷ ರೂಪಾಯಿ ವೆಚ್ಚದಲ್ಲಿ ಖಾಯಂ ಕಟ್ಟಡವೊಂದನ್ನು ಕಟ್ಟಿಸಲಾಗಿದೆ. ಇದು ಅಲ್ಲಿನ ಯೋಗಕೇಂದ್ರವಾಗಿದ್ದು ಕಟ್ಟಡಕ್ಕೆ ‘ಶಾಂತಿ ನಿಲಯಂ’ ಎಂದು ಹೆಸರಿಸಲಾಗಿದೆ.
ಆಶೆಯನ್ನು ನಿಯಂತ್ರಿಸುವುದನ್ನು ರಾಜಯೋಗ ಕಲಿಸಿಕೊಡುತ್ತದೆ. ಮನಸ್ಸಿನ ಉದ್ವೇಗವನ್ನು ಶಮನಗೊಳಿಸುವುದು, ಮತ್ತು ಪ್ರಶಾಂತ ಮನಸ್ಸಿನಿಂದ ಕೆಲಸ ಮಾಡುವುದಕ್ಕೆ ಯೋಗ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿಯರ ಸಂಘಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಸರಕಾರಿ ಅಧಿಕಾರಿಗಳು ಮತ್ತು ಸಚಿವರು ಬ್ರಹ್ಮಕುಮಾರಿಯರ ವಿದ್ಯಾರ್ಥಿಗಳಾಗಲಿದ್ದಾರೆ.
ಕೆಲವು ಕಡೆ ಯೋಗ ತರಗತಿಗಳು ಈಗಾಗಲೇ ಆರಂಭವಾಗಿವೆ. ಕಂಪ್ಯೂಟರ್ ಮುಖ್ಯಮಂತ್ರಿ ನಾಯ್ಡು ಅವರೂ ಯೋಗ ತರಗತಿಗಳಿಗೆ ಹಾಜರಾಗಿರುವ ಬಗ್ಗೆಯೂ ವರದಿಯಾಗಿದೆ. ಇದು ಕರ್ನಾಟಕದ ಹೈಟೆಕ್ ಕೃಷ್ಣರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ ...
(ಇನ್ಫೋ ವಾರ್ತೆ)