‘ರಾಜ್ಯದಲ್ಲಿ ಬಂಡವಾಳ ಹೂಡಲು 254 ಉದ್ದಿಮೆಗಳು ಮುಂದೆ ಬಂದಿವೆ’
ಬೆಂಗಳೂರು : ಜಾಗತಿಕ ಬಂಡಾವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಂಡವಾಳ ಹೂಡಲು 254 ಉದ್ದಿಮೆಗಳು ಮುಂದೆ ಬಂದಿವೆ. ಈ ಪೈಕಿ 36 ಯೋಜನೆಗಳು ಕಾರ್ಯಗತವಾಗಿವೆ ಎಂದು ರಾಜ್ಯದ ಭಾರಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ವಿಧಾನಪರಿಷತ್ತಿನಲ್ಲಿ ಬುಧವಾರ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ಬಿ.ಎಲ್. ಶಂಕರ್, ಯಡಿಯೂರಪ್ಪ ಮೊದಲಾದವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಸಚಿವರು, ಮುಂದಿನ ಆರು ತಿಂಗಳ ಅವಧಿಯಾಳಗೆ ಇನ್ನೂ 40 ಯೋಜನೆಗಳು ಆರಂಭವಾಗಲಿವೆ, 76 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ ಎಂದು ಹೇಳಿದರು.
ಉದ್ಯೋಗ ಮಿತ್ರ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅರ್ಜಿ ಸಲ್ಲಿಸಿದ 35 ದಿನಗಳೊಳಗೆ ಅನುಮತಿ ನೀಡಲಾಗುವುದು. ಹೊಸ ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪಾರದರ್ಶಕ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹೊಸ ಕೈಗಾರಿಕಾ ನೀತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರುಪಾಯಿ ನಿಧಿ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಕೈಗಾರಿಕೆಗಳ ತಂತ್ರಜ್ಞಾನ ಉನ್ನತೀಕರಣಕ್ಕೆ 5 ಕೋಟಿ ರುಪಾಯಿ ನಿಧಿ ಸ್ಥಾಪಿಸಲಾಗುವುದು ಎಂದೂ ಹೇಳಿದರು.
(ಇನ್ಫೋ ವಾರ್ತೆ)