ಮಹಾನಗರ ಪಾಲಿಕೆಯ 252 ನೌಕರರಿಗೆ ‘ಉತ್ತಮ ನೌಕರ’ ಪುರಸ್ಕಾರ
ಬೆಂಗಳೂರು : ಸಮಾಜವನ್ನು ಅಭಿವೃದ್ಧಿಪಡಿಸಬೇಕಾದರೆ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಮಾತ್ರವಲ್ಲದೆ ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂದು ನಗರ ಪಾಲಿಕೆ ಆಯುಕ್ತ ಅಶೋಕ್ ದಳವಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳವಾರ ನಡೆದ ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ಬೆಂಗಳೂರು ಮಹಾ ನಗರಪಾಲಿಕೆಯ 252 ಮಂದಿ ನೌಕರರಿಗೆ ಉತ್ತಮ ನೌಕರ ಪ್ರಶಸ್ತಿಯನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಪಾಲಿಕೆಯ ಒಟ್ಟು 18 ಸಾವಿರ ನೌಕರರಲ್ಲಿ 252 ನೌಕರರಿಗೆ ಉತ್ತಮ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೌಕರರು ಜನಪ್ರತಿನಿಧಿಗಳ ನಿರ್ಣಯಗಳನ್ನು ಜಾರಿಗೆ ತಂದು ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದ ಅಶೋಕ್ ದಳವಾಯಿ ಸಿಬ್ಬಂದಿಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಒದಗಿಸಲಾಗುವುದು. ಹುಡ್ಕೋ ನೆರವಿನಿಂದ ಸಿ ಮತ್ತು ಡಿ ದರ್ಜೆಯ ನೌಕರರಿಗೆ ವಸತಿ ಗೃಹವನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.
ಮೇಯರ್ ಪ್ರೇಮಾ ಕಾರಿಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಮೇಯರ್ ಹುಚ್ಚಪ್ಪ, ತೋಟಗಾರಿಕಾ ಇಲಾಖೆಯ ಉಪ ಆಯುಕ್ತ ಮದ್ದುಕೃಷ್ಣ ಸಮಾರಂಭದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)