ಬರ ಅಧ್ಯಯನಕ್ಕೆ ಬೆಂಗಳೂರಿಗೆ ಆಗಮಿಸಿದ ಕೇಂದ್ರ ತಂಡ
ಬೆಂಗಳೂರು : ರಾಜ್ಯ ಎದುರಿಸುತ್ತಿರುವ ಭೀಕರ ಬರ ಪರಿಸ್ಥಿತಿಯ ವಾಸ್ತವ ಅಧ್ಯಯನಕ್ಕಾಗಿ ಕೇಂದ್ರದ ತಂಡ ಮಂಗಳವಾರ ಬೆಂಗಳೂರಿಗೆ ಆಗಮಿಸಿತು. ಮುಖ್ಯಮಂತ್ರಿ ಕೃಷ್ಣ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿರುವ ತಂಡ ಮಂಗಳವಾರವೇ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಹಿರಿಯ ಅಧಿಕಾರಿ ಪಿ.ಕೆ. ಮಿಶ್ರ ನೇತೃತ್ವದಲ್ಲಿ ಕೆ. ಮುಜಂದಾರ್, ಜಲ್ಲಪ್ಪ ಪ್ರಸಾದ್, ಆರ್. ಸೇತೂರಾಮನ್ ಅವರನ್ನೊಳಗೊಂಡ ತಂಡ ಬರ ಅಧ್ಯಯನಕ್ಕೆ ಆಗಮಿಸಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ, ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು.
ಈ ನಾಲ್ವರು ಹಿರಿಯ ಅಧಿಕಾರಿಗಳು ಎರಡು ತಂಡಗಳಾಗಿ ಗುಲ್ಬರ್ಗಾ, ರಾಯಚೂರು, ಕೊಪ್ಪಳ ಮತ್ತು ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಮಂಗಳವಾರ ರಾತ್ರಿ ಉದ್ಯಾನ್ ಎಕ್ಸ್ಪ್ರೆಸ್ ಮತ್ತು ಲಿಂಕ್ ಎಕ್ಸ್ಪ್ರೆಸ್ ರೈಲಿನಲ್ಲಿ ತೆರಳಲಿದ್ದಾರೆ.
ಮೊದಲ ತಂಡ ಗುಲ್ಬರ್ಗಾ, ಷಹಾಬಾದ್, ಯಾದಗೀರ್, ರಾಯಚೂರು, ದೇವದುರ್ಗ, ಲಿಂಗಸುಗೂರು, ತಾವರೆಕೆರೆ, ಕಷ್ಟಗಿ ಕೊಪ್ಪಳ ಪ್ರದೇಶಗಳಲ್ಲಿ ಸಂಚರಿಸಿ, ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರೆ, ಎರಡನೇ ತಂಡ ಇಳಕಲ್, ಆಲಮಟ್ಟಿ, ಬಿಜಾಪುರ, ಹುನಗುಂದ, ಸಿಂದಗಿ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಳೆ ಬಂದಿತಾದರೂ, ಆನಂತರ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ 140 ತಾಲೂಕುಗಳು ಭೀಕರ ಬರ ಎದುರಿಸುವಂತಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇದ್ದು, ಜನ ಗುಳೆ ಏಳುತ್ತಿದ್ದಾರೆ.
ರಾಜ್ಯ ಸರಕಾರ 736 ಕೋಟಿ ರುಪಾಯಿಗಳ ಕೇಂದ್ರ ನೆರವಿಗೆ ಮನವಿ ಸಲ್ಲಿಸಿದೆ. ರಾಜ್ಯ ಬಿ.ಜೆ.ಪಿ. ನಿಯೋಗ ಕೂಡ ಪ್ರಧಾನಿಯವರನ್ನು ಭೇಟಿ ಮಾಡಿ, ಪರಿಸ್ಥಿತಿಯನ್ನು ವಿವರಿಸಿದೆ. ಆಗಸ್ಟ್ 7ರಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ನಿಯೋಗ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿ, ತುರ್ತು ಪರಿಹಾರಕ್ಕಾಗಿ ಮನವಿ ಸಲ್ಲಿಸಲಿದೆ.
ಮುಖಪುಟ / ಇವತ್ತು... ಈ ಹೊತ್ತು...