ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೆಂಕಿ, 25 ಲಕ್ಷ ರೂ. ನಷ್ಟ
ಮಲ್ಪೆ : ಇಲ್ಲಿನ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಎರಡು ಮೀನುಗಾರಿಕಾ ದೋಣಿಗಳು ಸುಟ್ಟು ಹೋಗಿದ್ದು, ಸುಮಾರು 25 ಲಕ್ಷ ರೂಪಾಯಿ ನಷ್ಟವಾಗಿದೆ.
ಮಳೆಗಾಲ ಆರಂಭವಾದಾಗಿನಿಂದ ಸಮುದ್ರದಿಂದ ಮೇಲಕ್ಕೆಳೆದು ನಿಲ್ಲಿಸಲಾಗಿದ್ದ ಪಡುಕೆರೆಯ ವಾರಿಜ .ಡಿ. ಕುಂದರ್ ಅವರ ‘ಶುಭ ಸಂಪತ್‘ ಹಾಗೂ ಕುಸುಮ ಕೋಟ್ಯಾನ್ ಅವರ ‘ಶುಭನಿಧಿ’ ಮೀನುಗಾರಿಕಾ ದೋಣಿಗಳು ಬೆಂಕಿ ಅನಾಹುತಕ್ಕೆ ತುತ್ತಾಗಿವೆ. ಎರಡು ದೋಣಿಗಳಿಗೆ ಹೊತ್ತಿಕೊಂಡ ಬೆಂಕಿ ಬೇರೆಡೆಗೆ ಪಸರಿಸುವ ಮುಂಚೆಯೇ ಇತರ ದೋಣಿಗಳನ್ನು ಸ್ಥಳೀಯರು ದೂರ ಸರಿಸಿ, ನಡೆಯುತ್ತಿದ್ದ ಭಾರೀ ಅನಾಹುತವನ್ನು ತಪ್ಪಿಸಿದರು.
ಮಲ್ಪೆ ಪೊಲೀಸ್ ಠಾಣಾಧಿಕಾರಿ ದಿನೇಶ್ ಕುಮಾರ್ ಮತ್ತು ಉಡುಪಿಯ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಹರಡದಂತೆ ಕ್ರಮ ತೆಗೆದುಕೊಂಡರು. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಯು. ಆರ್. ಸಭಾಪತಿ ವಿಧಾನ ಪರಿಷತ್ ಸದಸ್ಯ ವಿ. ಎಸ್. ಆಚಾರ್ಯ, ಬೆಂಕಿ ದುರಂತದಲ್ಲಿ ಆಗಿರುವ ನಷ್ಟವನ್ನು ಅಂದಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಸಿ, ದೋಣಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಹೇಳಿದರು.
(ಇನ್ಫೋ ವಾರ್ತೆ)