ಚಾಮರಾಜನಗರದಲ್ಲಿ ಕಾಡುಗಳ್ಳ ವೀರಪ್ಪನ್ ಹತ್ಯೆ ವದಂತಿ
ಚಾಮರಾಜನಗರ : ರಾಜ್ ಅಪಹರಣವಾಗಿ ವರ್ಷ ಕಳೆದರೂ ವೀರಪ್ಪನ್ ಸುಳಿವೇ ಸಿಗದಿರುವಾಗ, ಕಾಡುಗಳ್ಳ ವೀರಪ್ಪನ್ನನ್ನು ಹತ್ಯೆ ಮಾಡಿ ಇಲ್ಲಿಗೆ ಸಮೀಪದ ತಲಮಲೈ ಅರಣ್ಯದಲ್ಲಿ ಬಿಸಾಡಲಾಗಿದೆ ಎಂಬ ದಟ್ಟ ವದಂತಿ, ಚಾಮರಾಜನಗರ ನಾಗರಿಕರನ್ನೂ, ಪತ್ರಕರ್ತರನ್ನೂ ಬೇಸ್ತುಬೀಳಿಸಿತು.
ಇಲ್ಲಿಗೆ ಸಮೀಪದ ತಲಮಲೈ ಅರಣ್ಯದಲ್ಲಿ ವೀರಪ್ಪನ್ನನ್ನು ಕೊಲೆ ಮಾಡಲಾಗಿದೆ. ಆತನ ಶವ ಅನಾಥವಾಗಿ ಬಿದ್ದಿದೆ ಎಂಬ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಸುದ್ದಿಯಿಂದ ಆಶ್ಚರ್ಯಚಕಿತರಾದ ತಮಿಳುನಾಡು ಹಾಗೂ ಕರ್ನಾಟಕದ ಪತ್ರಕರ್ತರು, ಸತ್ಯಾಂಶ ತಿಳಿಯಲು ಪರದಾಡುವಂತೆ ಮಾಡಿತು.
ಈರೋಡ್ ಜಿಲ್ಲೆಯ ಅಪ್ಪಲಕೋಡು ಪೊಲೀಸ್ ಠಾಣೆಯ ವ್ಯಾಪ್ತಿಯ ಅತ್ತಣಿ ಅರಣ್ಯದಲ್ಲಿ ದೊಡ್ಡ ಮೀಸೆಯ ಅಪರಿಚಿತ ವ್ಯಕ್ತಿಯಾಬ್ಬನ ಕೊಲೆಯಾಗಿದ್ದೇ ಈ ವದಂತಿಗೆ ಕಾರಣ ಎಂದು ಆನಂತರ ಬಯಲಾಯ್ತು. ಪೊಲೀಸರು ಸಹ ಆರಂಭದಲ್ಲಿ ಆ ಶವ ವೀರಪ್ಪನ್ದೇ ಇರಬಹುದೆಂದು ಶಂಕಿಸಿದ್ದು, ಸುದ್ದಿ ಹಬ್ಬಲು ಕಾರಣವಾಯಿತು. ಆನಂತರ ಎಸ್ಟಿಎಫ್ ತಂಡ ಇದು ವೀರಪ್ಪನ್ ಶವವಲ್ಲ ಎಂದು ಖಚಿತಪಡಿಸಿತು.
ಮುಖಪುಟ / ವೀರಪ್ಪನ್ ಶಿಕಾರಿ