6 ತಿಂಗಳಲ್ಲಿ ಕೊಲ್ಲೂರು ದೇಗುಲ ವಿವಾದ ಇತ್ಯರ್ಥಕ್ಕೆ ಆದೇಶ
ಬೆಂಗಳೂರು : ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಬ್ರಹ್ಮೋತ್ಸವ ಆಚರಣೆಗೆ ಹಣ ಮೀಸಲಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಆಯುಕ್ತರು ಆರು ತಿಂಗಳೊಳಗೆ ಸೂಕ್ತ ಕ್ರಮಕೈಗೊಂಡು ವಿವಾದವನ್ನು ಬಗೆಹರಿಸುವಂತೆ ಹೈಕೋರ್ಟ್ನ ವಿಭಾಗೀಯ ಪೀಠ ಆದೇಶಿಸಿದೆ.
ದೇವಸ್ಥಾನದ ಅರ್ಚಕರಾದ ಪಟೇಲ್ ಸುಬ್ರಾಯ ಅಡಿಗ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳಾದ ಪಿ.ವಿ. ರೆಡ್ಡಿ ಹಾಗೂ ನ್ಯಾ. ಎನ್.ಕೆ. ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.
ಹಿನ್ನೆಲೆ : ಬ್ರಹ್ಮೋತ್ಸವ ಆಚರಣೆಗೆ ದೇವಸ್ಥಾನದ ಆದಾಯದ ಶೇಕಡಾ 10ರಷ್ಟು ಮೀಸಲಿಟ್ಟು, ಇದರಲ್ಲಿ ಅರ್ಚಕರಿಗೆ ಯಾವುದೇ ಪುರಸ್ಕಾರ ಅಥವಾ ದಕ್ಷಿಣೆ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು 1994ರ ಜುಲೈ 25ರಂದು ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಈ ಸಂಬಂಧ 1996 ಸೆಪ್ಟೆಂಬರ್ 5ರಂದು ಆದೇಶ ನೀಡಿದ ಏಕ ಸದಸ್ಯ ಪೀಠವು ಈ ವಿವಾದವನ್ನು ಅಧೀನ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವಂತೆ ಮತ್ತು ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು. ಏಕ ಸದಸ್ಯ ಪೀಠದ ತೀರ್ಪನ್ನು ಅರ್ಜಿದಾರರು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು.
ಅಲ್ಲದೆ ಬ್ರಹ್ಮೋತ್ಸವದ ಪಾಲನ್ನು ಹೆಚ್ಚಿಸುವಂತೆ ಮೇಲ್ಮನವಿಯಲ್ಲಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಭಾಗೀಯ ಪೀಠವು, ಎರಡೂ ಅರ್ಚಕ ಸಮುದಾಯದ ಅಹವಾಲು ಆಲಿಸಿ, ರಾಜೀ ಸೂತ್ರದ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಧಾರ್ಮಿಕ ದತ್ತಿ ಆಯುಕ್ತರಿಗೆ ಸೂಚಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...