ಗಣಿಗಾರಿಕೆ ವಿಸ್ತರಣೆ ಸ್ಥಳೀಯರ ನಿರ್ಧಾರ ಮುಖ್ಯ, ಕೇಂದ್ರದ್ದಲ್ಲ
ಶಿವಮೊಗ್ಗ : ಕುದುರೆಮುಖ ಗಣಿಗಾರಿಕೆ ಅನುಮತಿ ವಿಸ್ತರಣೆ ರಾಜ್ಯದ ಜನತೆಗೆ ಸಂಬಂಧಿಸಿದ ವಿಷಯವಾದ್ದರಿಂದ ಕೇಂದ್ರವನ್ನು ಕೇಳಬೇಕು ಎಂಬ ಸಬೂಬು ಹೇಳುವುದು ಸರಿಯಲ್ಲ ಎಂದು ಸಾಹಿತಿ ಡಾ. ಯು.ಆರ್. ಅನಂತ ಮೂರ್ತಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಗಣಿಗಾರಿಕೆಯ ಪ್ರಭಾವ ಕೇವಲ ಪರಿಸರದ ಮೇಲೆ ಮಾತ್ರವಲ್ಲ, ಈ ಪ್ರದೇಶದ ಜನರ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುತ್ತದೆ. ರಾಜಕಾರಣದ ಮೂಲಕ ಬಗೆಹರಿಸಬಹುದಾದ ವಿಷಯವನ್ನು ಸುಪ್ರೀಂ ಕೋರ್ಟಿನ ತನಕ ತೆಗೆದುಕೊಂಡು ಹೋಗಿ, ಈಗ ಕೋರ್ಟ್ ತೀರ್ಮಾನಕ್ಕೆ ಬಿಟ್ಟಿದ್ದೇವೆ ಎಂದು ಸರಕಾರ ಹೇಳುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಅವರು ಶಿವಮೊಗ್ಗದಲ್ಲಿ ಮಂಗಳವಾರ ಚಳವಳಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕೇಂದ್ರ ಎನ್ನುವುದು ಆಯಾ ಪ್ರದೇಶದಲ್ಲಿಯೇ ಇರುತ್ತದೆ. ಈ ಭಾಗಕ್ಕೇ ಇದೇ ಕೇಂದ್ರ. ಹೀಗಾಗಿ ಇಲ್ಲಿನ ಜನರ ಒಳಿತು ಕೆಡುಕು ಮತ್ತು ಅವರ ಅಭಿಪ್ರಾಯ ಮುಖ್ಯವೇ ಹೊರತು ಕೇಂದ್ರದ ಸರಕಾರದ ನಿರ್ಧಾರವಲ್ಲ ಎಂದು ಅನಂತ ಮೂರ್ತಿ ಹೇಳಿದರು.
ಮಲೆನಾಡಿನ ಏಳು ಜಿಲ್ಲೆಗಳಲ್ಲಿ ಬಂದ್ ಆಚರಣೆ ಯಶಸ್ವಿಯಾಗಿತ್ತು. ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥ ಹಳ್ಳಿಯಲ್ಲಿ ಬಂದ್ ಶಾಂತಿಯುತವಾಗಿತ್ತು. ಶಾಲಾ ಕಾಲೇಜು, ಬ್ಯಾಂಕ್ ವ್ಯವಹಾರ, ಅಂಗಡಿ ಮುಂಗಟ್ಟುಗಳು ಬಂದ್ಪ್ರಯುಕ್ತ ಮುಚ್ಚಿದ್ದವು. ವಕೀಲರೂ ಕೂಡ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿದ್ದರು. ಸುಮಾರು 71 ಸಂಘಟನೆಗಳ ಕಾರ್ಯಕರ್ತರು ಗಣಿಗಾರಿಕೆ ವಿಸ್ತರಣೆ ವಿರೋಧಿಸಿ ಶಿವಮೊಗ್ಗದಲ್ಲಿ ಮೆರವಣಿಗೆ ನಡೆಸಿದರು.
ಕಳಸ, ಶೃಂಗೇರಿ, ಕೊಪ್ಪ, ಕುದುರೆಮುಖ, ಬಾಳೆಹೊನ್ನೂರು, ಹರಿಹರಪುರ, ಜಯಪುರ, ಚಿಕ್ಕಮಗಳೂರಿನಲ್ಲಿಯೂ ಗಣಿಗಾರಿಕೆ ವಿರೋಧಿಸಿ ಬಂದ್ ಆಚರಿಸಲಾಯಿತು. ಶೃಂಗೇರಿಯಲ್ಲಿ ಪಕ್ಷಬೇಧವಿಲ್ಲದೆ ಗಣಿಗಾರಿಕೆ ವಿರೋಧಿಸಿ ಬೃಹತ್ ರ್ಯಾಲಿ ನಡೆಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...