ಹಾವು ಹಾಲು ಕುಡಿಯುತ್ತೆಅಂತ ಯಾರು ಹೇಳಿದ್ದು ? ಸ್ವಾಮೀಜಿ ಪ್ರಶ್ನೆ
ದಾವಣಗೆರೆ : ನಾಗರ ಪಂಚಮಿ ಮತ್ತು ಇತರ ನಾಗ ಹಬ್ಬಗಳ ಸಂದರ್ಭದಲ್ಲಿ ಹಾವಿಗೆ ಹಾಲೆರೆಯುವುದು ಮೌಢ್ಯತೆ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದಲ್ಲಿ ಮಂಗಳವಾರ ನಾಗರ ಪಂಚಮಿಯ ಪ್ರಯುಕ್ತ, ಅಂಗವಿಕಲ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡುತ್ತಿದ್ದರು. ನಗರದ ಬಸವರಾಜ ಪೇಟೆಯ ಬಸವ ಕೇಂದ್ರ , ಶಿವಯೋಗಾಶ್ರಮ ಟ್ರಸ್ಟ್ ಹಾಗೂ ಆಶಾ ಕಿರಣ ಟ್ರಸ್ಟ್ ಸಂಯುಕ್ತವಾಗಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಹಾವು ಮೂಲತಃ ಅಂಡಜವಾಗಿದ್ದು ಅದು ಹಾಲನ್ನು ಆಸ್ವಾದಿಸುವುದಿಲ್ಲ. ಹಾವು ಹಾಲು ಕುಡಿಯುತ್ತದೆ ಎಂದು ಸುಳ್ಳು ಸುಳ್ಳೇ ನಂಬಿಕೊಂಡು ನಾಗರ ಪಂಚಮಿಯಂದು ಹಾವಿಗೆ ಅಥವಾ ನಾಗನ ಕಲ್ಲಿಗೆ ಹಾಲೆರೆಯುವುದು ಅವೈಜ್ಞಾನಿಕವಾದುದು. ಆಚರಣೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಾಮರ್ಶಿಸಿ ನಂತರ ಆಚರಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಹಾವು ಹಾಲು ಸೇವಿಸುತ್ತದೆ ಎಂದು ಕಲ್ಲಿನ ಮೇಲೆ ಸುರಿದು ಹಾಲನ್ನು ಅಪವ್ಯಯ ಮಾಡುವುದರ ಬದಲು ಸಮಾಜದಲ್ಲಿರುವ ಬಡ ಮಕ್ಕಳಿಗೆ ವಿತರಿಸಿದರೆ ನಿಜವಾದ ಪುಣ್ಯ ಬರುತ್ತದೆ ಎಂದು ಅವರು ವಿವರಿಸಿದರು.
(ಇನ್ಫೋ ವಾರ್ತೆ)