ಜಾಗತೀಕರಣ ಕುರಿತು ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳುತ್ತಾರೆ..
ಲಂಡನ್ : ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಚೀನಾಕ್ಕಿಂತ ಭಾರತ ಕನಿಷ್ಠ ಐದು ವರ್ಷಗಳಷ್ಟು ಮುಂದಿದೆ ಎಂದು ಇನ್ಫೋಸಿಸ್ ಟೆಕ್ನಾಲಜೀಸ್ ಮುಖ್ಯ ವ್ಯವಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮಂಗಳವಾರ ಹೇಳಿದ್ದಾರೆ.
ಲಂಡನ್ನಲ್ಲಿ ಭಾರತೀಯ ಸಾಫ್ಟ್ವೇರ್ ಕುರಿತ ಸಭೆಯಲ್ಲಿ ಭಾಗವಹಿಸಿ, ಅವರು ಮಾತಾಡುತ್ತಿದ್ದರು.
ಪ್ರಸಕ್ತ ಆರ್ಥಿಕ ಸ್ಥಿತಿಯಲ್ಲಿ ಭಾರತದ ಐಟಿ ಮಾದರಿ ಎಷ್ಟು ಉತ್ತಮ ಎಂಬುದು ಚರ್ಚೆಯ ವಿಷಯವಾಗಿತ್ತು. ಭಾರತ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಒಂದು ಪಥ ಪೂರೈಸಿ, ಮತ್ತೊಂದು ಪಥದಲ್ಲಿ ಪ್ರಗತಿಯ ಸುತ್ತು ತಿರುಗಲಾರಂಭಿಸಿದೆ. ಈ ಹೊಸತನ ಜಾಗತಿಕ ಮಾರುಕಟ್ಟೆಯಲ್ಲಿನ ತುರುಸು ಸ್ಪರ್ಧೆಗೆ ಭಾರತ ಎದೆಗೊಡುವಂತೆ ಮಾಡಿದೆ ಎಂದರು.
ಸಿಸ್ಟಂ ಇಂಟಿಗ್ರೇಷನ್ ಮತ್ತು ಸೊಲ್ಯುಷನ್ಸ್ ಜಗತ್ತಿನತ್ತ ಭಾರತದ ಕಂಪನಿಗಳು ಕ್ಷಿಪ್ರ ಗತಿಯಲ್ಲಿ ಹೊರಳುತ್ತಿದ್ದು, ಆರ್ಥಿಕ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ 35 ರಿಂದ 40 ಪ್ರತಿಶತ ಪ್ರಗತಿ ಸಾಫ್ಟ್ವೇರ್ ಉದ್ದಿಮೆಯಲ್ಲಿ ಸಾಧ್ಯವಾಗಲಿದೆ. ಇದೊಂದು ಆರೋಗ್ಯಕರ ಬೆಳವಣಿಗೆ. ಭಾರತೀಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಜಾಗತೀಕರಣದ ಸ್ವರೂಪದ ಬುನಾದಿಯಲ್ಲಿರುವುದರಿಂದ ಜಗತ್ತಿನ ಉದ್ದಿಮೆದಾರರೆಲ್ಲಾ ಅಬ್ಬಾ ಎನ್ನುವಷ್ಟರ ಮಟ್ಟಿಗೆ ನಾವು ಬೆಳೆಯಲಿದ್ದೇವೆ ಎಂಬ ಆಶಾವಾದವನ್ನು ನಾರಾಯಣ ಮೂರ್ತಿ ವ್ಯಕ್ತಪಡಿಸಿದರು.
ನಾರಾಯಣ ಮೂರ್ತಿ ಅವರ ಪ್ರಕಾರ ಜಾಗತೀಕರಣ ಅಂದರೆ- ಎಲ್ಲಿ ಅಗ್ಗವಾಗಿ ಬಂಡವಾಳ ದಕ್ಕುತ್ತದೋ ಅದನ್ನು ಪಡೆದು, ಉತ್ಪನ್ನ ತಯಾರಿಸಿ, ಲಾಭ ತರುವ ಜಾಗೆಯಲ್ಲಿ ಬಿಕರಿ ಮಾಡುವುದು. ಜಾಗತೀಕರಣದಿಂದ ಸ್ಥಳೀಯ ಕಂಪನಿಗಳು ಗೋಳಿಡುತ್ತಿವೆ ಎಂಬ ಸೊಲ್ಲಿಗೆ ಅಕ್ಷರಶಃ ತದ್ವಿರುದ್ಧವಾದ ಹೇಳಿಕೆಯಿದು. ಜಾಗತೀಕರಣ ನಮಗೆ ವರದಾನ ಎಂಬ ಸಾರಾಂಶ ಈ ಮಾತಿನಲ್ಲಿ ಹುದುಗಿದೆ. ಇದಕ್ಕೆ ನೀವೇನಂತೀರಿ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...