ಕಾಶ್ಮೀರ ಕಣಿವೆಯಲ್ಲಿನ ರಕುತದ ನೆರೆಗೆ ಮುಷರ್ರಫ್ ಹೇಳಿಕೆ ಕಾರಣವೆ?
ನವದೆಹಲಿ : ದೋಡಾ ಹಾಗೂ ಅಮರ್ನಾಥ್ನಲ್ಲಿ ನಡೆದ 13 ಜನರ ಹತ್ಯೆಗೆ ಪರೋಕ್ಷವಾಗಿ ಪಾಕಿಸ್ತಾನವೇ ಕಾರಣ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವುದು ಹತ್ಯಾಕಾಂಡವಲ್ಲ, ಸ್ವಾತಂತ್ರ್ಯ ಹೋರಾಟ ಎಂದು ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಹೇಳಿರುವುದೇ ಭಯೋತ್ಪಾದಕರಿಗೆ ಬೆನ್ನುತಟ್ಟಿದಂತಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಕಿಡಿ ಕಾರಿದ್ದಾರೆ.
ಸ್ಟಾರ್ ಟಿವಿಯ ಸ್ಟಾರ್ ರವಿವಾರ್ ಎಂಬ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಸೋಮವಾರ ಸಚಿವೆ ಈ ಮಾತುಗಳನ್ನಾಡಿದರು. ಭಾರತದಲ್ಲಿನ ಪಾಕ್ ದೂತಾವಾಸದ ಪ್ರಮುಖ ಅಶ್ರಫ್ ಜಹಾಂಗೀರ್ ಹಾಗೂ ಸುಷ್ಮಾ ಅವರೊಂದಿಗೆ ಮಾತುಕತೆಯ ಕಾರ್ಯಕ್ರಮ ಇದಾಗಿತ್ತು. ಆಗ್ರಾ ಶೃಂಗಸಭೆಯ ಬಗ್ಗೆ ಎರಗಿದ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸುತ್ತಿದ್ದರು.
ಒಂದು ಹಂತದಲ್ಲಿ ಮುಷರ್ರಫ್ ಅವರನ್ನು ಅಶ್ರಫ್ ಸಮರ್ಥಿಸಿಕೊಂಡಾಗ ಸುಷ್ಮಾ ಕ್ರುದ್ಧರಾದರು. ಪರಿಣಾಮ ಇಬ್ಬರ ನಡುವೆ ತೂ ತೂ.. ಮೇಮೇ... ಶುರುವಾಯಿತು. ಖಂಡಾತುಂಡಾಗಿ ಮಾತಾಡಿದ ಸುಷ್ಮಾ, ಮುಷರ್ರಫ್ ಅವರ ಹೇಳಿಕೆ ಭಯೋತ್ಪಾದನೆಗೆ ಮುಕ್ತ ಬೆಂಬಲ ಸೂಚಿಸಿದಂತಾಗಿದೆ. ಇದೇ ರೀತಿ ಮುಗ್ಧ ಜನರನ್ನು ನೀವು ಕೊಲ್ಲುತ್ತಾ ಹೋದಲ್ಲಿ , ನವದೆಹಲಿ- ಇಸ್ಲಾಮಾಬಾದ್ ನಡುವೆ ಶಾಂತಿ ಸಂಧಾನದ ಪ್ರಕ್ರಿಯೆ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮುಷರ್ರಫ್ ಆಗ್ರಾ ಭೇಟಿಯ ವೇಳೆ ತಮ್ಮ ಸುದ್ದಿ ಹೇಳಿಕೆಯಲ್ಲಿ ಕಾಶ್ಮೀರ ವಿವಾದದ ವಿಷಯ ಪ್ರಸ್ತಾಪಿಸದ ಕಾರಣ ಸುಷ್ಮಾ ಸ್ವರಾಜ್ ಅವರನ್ನು ಮುಷರ್ರಫ್ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)