ರಾಜ್ಯಾದ್ಯಂತ ಕಿರಿಯ ವೈದ್ಯರುಗಳ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭ
ಬೆಂಗಳೂರು : ಇತ್ತೀಚೆಗಷ್ಟೇ ಸರ್ಕಾರ ಮಂಜೂರು ಮಾಡಿರುವ ನಾಲ್ಕು ಮೆಡಿಕಲ್ ಕಾಲೇಜುಗಳನ್ನು ತಕ್ಷಣ ರದ್ದು ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಿರಿಯ ವೈದ್ಯರ ಸಂಘದ ಸದಸ್ಯರು ಅನಿರ್ದಿಷ್ಟ ಕಾಲದ ಧರಣಿ ಸತ್ಯಾಗ್ರಹವನ್ನು ಸೋಮವಾರ ಪ್ರಾರಂಭಿಸಿದರು.
ಬೆಂಗಳೂರಿನ ವಿಕ್ಟೋರಿಯಾ, ವಾಣಿ ವಿಲಾಸ, ಬೌರಿಂಗ್ ಆಸ್ಪತ್ರೆಯ ಕಿರಿಯ ವೈದ್ಯರುಗಳು ತಮ್ಮ ಕರ್ತವ್ಯವನ್ನು ಬಹಿಷ್ಕರಿಸಿ ಸೋಮವಾರದ ಮುಷ್ಕರದಲ್ಲಿ ಪಾಲ್ಗೊಂಡರು. ರಾಜ್ಯದಲ್ಲಿರುವ ಒಟ್ಟು 18 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಸುಮಾರು 7 ಸಾವಿರ ಸ್ನಾತಕೋತ್ತರ ಹಾಗೂ ಹೌಸ್ ಸರ್ಜನ್ ಕಿರಿಯ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಮೈಸೂರು, ಹುಬ್ಬಳ್ಳಿ, ಬಳ್ಳಾರಿಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಯ ಕಿರಿಯ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿರುವ ವರದಿಗಳು ಬಂದಿದ್ದು , ಕಿರಿಯ ವೈದ್ಯರುಗಳ ಬೇಡಿಕೆಗೆ ಸರ್ಕಾರ ಒಪ್ಪದಿದ್ದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಕೂಡ ಮಂಗಳವಾರದಿಂದ ಮುಷ್ಕರದಲ್ಲಿ ಭಾಗಿಯಾಗುವರೆಂದು ಸಂಘದ ಅಧ್ಯಕ್ಷ ಡಾ. ಎಚ್.ಜಿ. ವಿಜಯ್ಕುಮಾರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)