ಸದ್ಯದಲ್ಲೇ ಕರಾವಳಿ ಮೀನುಗಾರರಿಗಾಗಿ 1,000 ಮನೆ ನಿರ್ಮಾಣ
ಉಡುಪಿ : ಕರಾವಳಿಯ ಮೀನುಗಾರರಿಗೆ 1,000 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಮೀನುಗಾರಿಕಾ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನ ಎರಡನೇ ಹಂತದ ಕಾಮಗಾರಿಯನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ ರಮಾನಾಥ ರೈ ಅವರು ಭಾನುವಾರ ಯಾಂತ್ರಿಕ ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಒಟ್ಟು ಮೀನುಗಾರಿಕಾ ಉತ್ಪನ್ನಗಳಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಕೊಡುಗೆ ನೀಡುವ ಕರಾವಳಿ ಪ್ರದೇಶಕ್ಕೆ ಅಧಿಕ ಸೌಲಭ್ಯ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಡಾ. ವಿ.ಎಸ್. ಆಚಾರ್ಯ ಒತ್ತಾಯಿಸಿದ್ದರು. ಅವರ ಕೋರಿಕೆಯ ಮೇರೆಗೆ ಮೀನುಗಾರರಿಗೆ ಒಂದು ಸಾವಿರ ಮನೆಗಳನ್ನು ಕಟ್ಟಿಕೊಡಲಾಗುವುದು ಎಂದು ರಮಾನಾಥ ರೈ ಹೇಳಿದರು.
ಸಿಎನ್ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಬಳಕೆಗೆ ಮೀನುಗಾರರು ಸಿದ್ಧರಾಗಬೇಕು. ಮೊದಲ ಬಾರಿಗೆ ಸಿಎನ್ಜಿ ಕಿಟ್ನ್ನು ಕೊಡಲು ಮುಖ್ಯಮಂತ್ರಿಗಳು ಒಪ್ಪಿರುವುದಾಗಿ ಡಾ. ಆಚಾರ್ಯ ಮೀನುಗಾರರಿಗೆ ತಿಳಿಸಿದರು.
(ಇನ್ಫೋ ವಾರ್ತೆ)