ಶ್ರಾವಣದ ಗಾಳಿಯಲ್ಲಿ ಬಾನಂಗಳದಿ ಗಾಳಿ ಪಟಗಳ ರಂಗೋಲಿ
ಬೆಂಗಳೂರು : ಆಷಾಢದಲ್ಲಿ ನವವಿವಾಹಿತರು ವಿರಹ ವೇದನೆಯಿಂದ ಪರಿತಪಿಸಿದರೆ, ಮಕ್ಕಳು ಬಾನಂಗಳದಲ್ಲಿ ಗಾಳಿಪಟಗಳನ್ನು ಹಾರಿಸಿ ನಕ್ಕು ನಲಿಯುತ್ತಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿವರ್ಷ ಆಷಾಢದಲ್ಲಿ ಗಾಳಿ ಪಟ ಹಾರಿಸುವ ಸ್ಪರ್ಧೆ, ಉತ್ಸವವೂ ನಡೆಯುತ್ತದೆ.
ಆದರೆ, ಈ ಬಾರಿ ಆಷಾಢದ ಬದಲು ಶ್ರಾವಣದಲ್ಲಿ ಗಾಳಿಪಟಗಳ ಸ್ಪರ್ಧೆ ನಡೆಯಿತು. ಜುಲೈ 22ರ ಭಾನುವಾರ ಬೆಂಗಳೂರಿನಲ್ಲಿ ಶ್ರಾವಣ ಮಾಸಾರಂಭದ ಗಾಳಿಯಲ್ಲಿ ಆಬಾಲ ವೃದ್ಧರಾದಿಯಾಗಿ ನೂರಾರು ಮಂದಿ ಬಣ್ಣಬಣ್ಣದ ವಿವಿಧ ನಮೂನೆಯ ಗಾಳಿಯ ಪಟ ಹಾರಿಸಿ ಆನಂದಪಟ್ಟರು. ಬಹುಮಾನಗಳನ್ನೂ ಪಡೆದರು.
ಶುಭ್ರವಾದ ನೀಲಾಗಸದಿ, ಹೊಳೆಯುತ್ತಿದ್ದ ಸೂರ್ಯನನ್ನೇ ನುಂಗುವಂತೆ ನೂರಾರು ಗಾಳಿಪಟಗಳು ಮುಗಿಲಿನೆತ್ತರಕ್ಕೆ, ತಾಮುಂದು ನಾ ಮುಂದು ಎಂದು ಮುಗಿಬಿದ್ದು ಹಾರುತ್ತಿದ್ದವು. ಸೂತ್ರ ಸರಿಯಿಲ್ಲದ ಗಾಳಿ ಪಟಗಳು ಲಾಗ ಹಾಕುತ್ತಿದ್ದರೆ, ಪುಟ್ಟ ಮಕ್ಕಳು ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಕೈಯಲ್ಲೊಂದು ಮೋಟು ದಾರಕಟ್ಟಿದ ಪುಟ್ಟ ಗಾಳಿಪಟ ಹಿಡಿದು ಮೈದಾನದಲ್ಲೆಲ್ಲಾ ಓಡಾಡುತ್ತಿದ್ದರು.
ಕರ್ನಾಟಕ ಜಾನಪದ ಪರಿಷತ್ತು ಏರ್ಪಡಿಸಿದ್ದ 32ನೇ ಗಾಳಿಪಟದ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಪಟ ಹಾರಿಸುವ ಹಾಗೂ ತಯಾರಿಸುವ ತಜ್ಞರು ಪಾಲ್ಗೊಂಡಿದ್ದರು. ಯಕ್ಷಗಾಲ ಕಲಾವಿದ, ಕುದುರೆ, ಒಂಟೆ, ಸೂರ್ಯ, ಮಿಕ್ಕಿಮೌಸ್, ನವಿಲು, ಗಂಟೆ, ಕರಡಿಯಾಕಾರದ ನೂರಾರು ರಂಗು ರಂಗಿನ ಗಾಳಿಪಟಗಳು ಮುಗಿಲನ್ನೆಲ್ಲಾ ಆವರಿಸಿದ್ದವು.
ನಾಲ್ಕು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಎಲ್ಲರ ಗಮನ ಸೆಳೆದದ್ದು, ಮಂಡ್ಯದ ಶಿವಣ್ಣ ಮತ್ತು ತಂಡದವರು ಹಾರಿಬಿಟ್ಟ 1500 ಪಟಗಳ ಅತಿ ಉದ್ದದ ಗಾಳಿಪಟ. ಒಂದು ಗಾಳಿಪಟದ ಹಿಂದೆ ಮತ್ತೊಂದು ಗಾಳಿಪಟ ಕಟ್ಟಿ ಹನುಮಂತನ ಬಾಲದಂತೆ ಬೆಳೆಸಲಾಗಿದ್ದ ಅತಿ ಉದ್ದದ ಗಾಳಿಪಟ ಬಾನಂಗಳದಿ ಹಾರಾಡಿದಾಗ ಅಲ್ಲಿ ನೆರೆದಿದ್ದ ನೂರಾರು ಮಂದಿ ಕರತಾಡನ ಮಾಡಿದರು.
ಕೈ ಚಪ್ಪಾಳೆ ತಟ್ಟುವ ಹುಮ್ಮಸ್ಸಿನಲ್ಲಿ ಕೆಲವರು ತಾವು ಹಿಡಿದಿದ್ದ ಗಾಳಿಪಟದ ದಾರವನ್ನೂ ಕೈಬಿಟ್ಟ ಪ್ರಸಂಗವೂ ನಡೆಯಿತು. ನಾಲ್ಕು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಮೂರು ಬಹುಮಾನ ಪಡೆದವರಿವರು :
12 ವರ್ಷದೊಳಗಿನವರು : ಪ್ರಸನ್ನ ಕುಮಾರ್, ನವೀನ್ ಕುಮಾರ್, ಭಾವನ.
13ರಿಂದ 22 ವರ್ಷದೊಳಗಿನವರು : ಕೆ. ನರೇಂದ್ರ ಬಾಬು, ಆರ್. ಶ್ರೀನಿವಾಸ್, ನಂಜುಂಡ
23 ವರ್ಷ ಮೇಲ್ಪಟ್ಟವರು : ಪ್ರಶಾಂತ್, ಚೌಡಪ್ಪ, ನರೇಂದ್ರ ಬಾಬು
ಹಿರಿಯರ ತಂಡ : ಶಿವಣ್ಣ, ಪಾಂಡುರಂಗ, ಎಲ್.ಎನ್. ಶ್ರೀನಾಥ್
ಮುಖಪುಟ / ಇವತ್ತು... ಈ ಹೊತ್ತು...