ಚಿಕ್ಕಕೆರೆಯಿಂದೆದ್ದ ಗಣಪ
* ಎಸ್. ವಸಿಷ್ಠ
ಬೆಂಗಳೂರು : ಶ್ರಾವಣ ಬಂತೆಂದರೆ, ಹಬ್ಬಗಳ ಸುಗ್ಗಿ, ಮಂಗಳಗೌರಿ, ಶ್ರಾವಣ ಶನಿವಾರ, ನಾಗರಪಂಚಮಿ, ಅನಂತಪದ್ಮನಾಭ ವ್ರತ, ಗುರುರಾಯರ ಆರಾಧನೆ, ಕೃಷ್ಣಜನ್ಮಾಷ್ಟಮಿ, ವರಮಹಾಲಕ್ಷ್ಮೀ ವ್ರತ... ಹೀಗೆ ಹಬ್ಬಗಳ ಸಾಲುಸಾಲು.
ಆಷಾಢದ ವಿರಹ ಮರೆಯುವ ಮೊದಲೇ ಸಂಭ್ರಮದ ಶ್ರಾವಣ ಮುಗಿದೇ ಹೋಗಿರುತ್ತದೆ. ಭಾದ್ರಪದವೂ ಬಂದಿರುತ್ತದೆ. ಗೌರಿ - ಗಣೇಶನ ಹಬ್ಬದ ಸಂಭ್ರಮ ಎಲ್ಲೆಡೆ ಕಾಣುತ್ತಿರುತ್ತದೆ. ಈ ಬಾರಿಯಂತೂ ಸರಿಯಾಗಿ ಒಂದು ತಿಂಗಳ ಮೊದಲೇ ಮಾರುಕಟ್ಟೆಗೆ ಗಣೇಶನ ಆಗಮನವಾಗಿದೆ.
ಭಾದ್ರಪದ ಚತುರ್ಥಿಯಂದು ಬಂದು, ಕಾಯಿ ಕಡುಬು ತಿಂದು, ದೊಡ್ಡಕೆರೇಲಿ ಬಿದ್ದು, ಚಿಕ್ಕಕೆರೆಯಲ್ಲಿ ಏಳುವ ಗಣಪನ ಹಬ್ಬದ ಆನಂದವೇ ಆನಂದ. ಈ ವರ್ಷ ಆಗಸ್ಟ್ 22ರಂದು ಗಣೇಶ ಚತುರ್ಥಿ. ಆದರೆ, ಜುಲೈ 22ರಂದೇ ವಿವಿಧ ಆಕಾರದ, ವಿವಿಧ ಗಾತ್ರದ, ವಿವಿಧ ವೇಷದ ಗಣಪ ಬೆಂಗಳೂರು ಮಾರುಕಟ್ಟೆಯನ್ನಲಂಕರಿಸಿದ್ದಾನೆ. ಬೆಂಗಳೂರು ಲಾಲ್ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಬೃಹತ್ ಗಾತ್ರದ ನೂರಾರು ಗಣಪನ ವಿಗ್ರಹಗಳು ಪ್ಲಾಸ್ಟಿಕ್ ಹೊದಿಕೆ ಹೊದ್ದು ಕುಳಿತಿವೆ.
ಕಳೆದ ವರ್ಷ ವೀರಪ್ಪನ್ ಡಾ.ರಾಜ್ಕುಮಾರ್ರನ್ನು ಅಪಹರಿಸಿದ್ದ ಹಿನ್ನೆಲೆಯಲ್ಲಿ ಕಾಡುಗಳನ್ನನ್ನು ಮರ್ಧಿಸುತ್ತಿರುವ ಗಣಪ ಮಾರುಕಟ್ಟೆ ಪ್ರವೇಶಿಸಿದ್ದ. ಅದಕ್ಕೂ ಹಿಂದಿನ ವರ್ಷ ಕಾರ್ಗಿಲ್ ಯೋಧನಾಗಿ ಗಣಪ ಕಾಣಿಸಿಕೊಂಡಿದ್ದ. ಆದರೆ, ಈ ವರ್ಷದ ವಿಶೇಷ ಏನು ಗೊತ್ತೆ? ಭಾರತ- ಪಾಕ್ ಶೃಂಗಸಭೆ.
ಹೀಗಾಗಿ ಗಣಪ ಪಾಕ್ ಅಧ್ಯಕ್ಷ ಮುಷರ್ರಫ್ ಹಾಗೂ ಭಾರತದ ಪ್ರಧಾನಿ ವಾಜಪೇಯಿ ಅವರ ನಡುವಿನ ಸಂಧಾನಕಾರನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಎರಡು ದೇಶದ ಈ ಇಬ್ಬರು ನಾಯಕರ ಮಧ್ಯೆ ನರ್ತನವಾಡುತ್ತಿರುವ ಮಣ್ಣಿನ ವಿಗ್ರಹ ಸಿದ್ಧವಾಗುತ್ತಿದೆ. ಆದರೆ, ತಿಂಗಳು ಮೊದಲೇ ಗಣಪನೇಕೆ ಮಾರುಕಟ್ಟೆಗೆ ಬಂದಿಹ ಎಂಬುದು ಮಾತ್ರ ನಿಗೂಢ.
ಈ ಮಧ್ಯೆ ಮಣ್ಣಿನ ಗಣಪನ ಮಾಡುವ ಸಾವಿರಾರು ಕುಶಲ ಕರ್ಮಿಗಳು ನಾನಾ ಆಕಾರದ, ಗೌರಿ ಗಣಪನ ತಯಾರಿ ಮುಗಿಸಿ, ಬಣ್ಣ ಹಚ್ಚುವ ಕಾಯಕದಲ್ಲಿ ತೊಡಗಿದ್ದಾರೆ. ಅರ್ಧ 4 ಇಂಚಿನ ಎತ್ತರದಿಂದ ಹಿಡಿದ 14 ಅಡಿ ಗಣಪನ ಮೂರ್ತಿಗಳು ಬೆಂಗಳೂರು ಮಾರುಕಟ್ಟೆಯಲ್ಲೀಗ ವಿಜೃಂಭಿಸುತ್ತಿವೆ.
ಕಳೆದ ವರ್ಷ ರಾಜ್ಕುಮಾರ್ ಅಪಹರಣದ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಗಳು ತಮ್ಮ ಎಂದಿನ ಸಂಭ್ರಮವಿಲ್ಲದೆ ಗಣಪನ ಹಬ್ಬ ಆಚರಿಸಿದ್ದವು. ಮತ್ತೆ ಕೆಲವು ಸಮಿತಿಗಳು ಕಳೆದ ವರ್ಷ ತಮ್ಮ ಗಣೇಶೋತ್ಸವ ಕಾರ್ಯಕ್ರಮವನ್ನೇ ರದ್ದುಪಡಿಸಿದ್ದವು. ಹೀಗಾಗಿ ಗಣಪನ ವ್ಯಾಪಾರಿಗಳು ನಷ್ಟವನ್ನೂ ಅನುಭವಿಸಿದ್ದರು.
ಬರದ ಭೀತಿ : ಈ ಬಾರಿ ಕರ್ನಾಟಕವನ್ನಾವರಿಸಿರುವ ಬರ ವ್ಯಾಪಾರಿಗಳನ್ನು ಕಂಗೆಡಿಸಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅನ್ನಾಹಾರಕ್ಕಾಗಿಯೇ ಹಾಹಾಕಾರ ಪಡುತ್ತಿರುವ ಮಂದಿ ಗಣೇಶ ಹಬ್ಬವನ್ನೇನು ಮಾಡಿಯಾರು ಎನ್ನುವುದು ಒಬ್ಬ ವ್ಯಾಪಾರಿಯ ಅಭಿಪ್ರಾಯವಾದರೆ, ಬೆಂಗಳೂರಿನಂತಹ ಪಟ್ಟಣಗಳಲ್ಲಿ ಆ ಪ್ರಾಬ್ಲಮ್ ಇಲ್ಲ ಸಾರ್. ಕಳೆದ ಬಾರಿ ಉತ್ಸವ ಮಾಡದವರೂ ಈ ಬಾರಿ ಗಣೇಶೋತ್ಸವ ಮಾಡ್ತಾರೆ ಹೀಗಾಗೆ ಈಗಲೇ ದೊಡ್ಡ ದೊಡ್ಡ ಗಣಪನ ತಂದಿದ್ದೀವಿ. ಆಗಲೇ ಮೂರ್ನಾಲ್ಕು ಗಣೇಶ ಸಮಿತಿಗಳು ಅಡ್ವಾನ್ಸ್ ಮಾಡಿವೆ ಎನ್ನುತ್ತಾರೆ.
ಯಲಹಂಕ ಮುಖ್ಯರಸ್ತೆ, ಮಲ್ಲೇಶ್ವರ, ಮೈಸೂರು ರಸ್ತೆಯ ಖಾಲಿ ನಿವೇಶನದಲ್ಲಿ ಷೇಡ್ ಹಾಕಿಕೊಂಡಿರುವ ಕೆಲವರು ಅಲ್ಲೇ ಮಣ್ಣಿನ ಗಣೇಶ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಗಣೇಶನಿಗೆ ಯಾವುದೇ ಕಾಸ್ಟೂಮ್ ಹಾಕಿದರೂ ಚೆನ್ನಾಗೇ ಕಾಣುತ್ತಾನೆ. ಹೀಗಾಗೇ ಗಣಪ ಯೋಧನಾಗಿ, ರಾಜಕಾರಣಿಯಾಗಿ, ಸಿಂಹ ವಾಹನನಾಗಿ, ಮೂಷಿಕ ವಾಹನನಾಗಿ, ಮಯೂರ ವಾಹನನಾಗಿ ನಾನಾ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ.
ಈ ಭಾರಿ ದಕ್ಷಿಣ ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳ ರಾಗ-ದ್ವೇಷವನ್ನು ಹೋಗಲಾಡಿಸಲು ಗಣಪ ಮುಷರ್ರಫ್ - ಅಟಲ್ರೊಂದಿಗೇ ಬರುತ್ತಿದ್ದಾನೆ. ಶ್ರಾವಣದಲ್ಲೇ ಮಾರುಕಟ್ಟಗೆ ಬಂದಿರುವ ಗಣಪನ ನಾವೂ ಮುಗಿಬಿದ್ದು ಸ್ವಾಗತಿಸೋಣ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications