ನೇತ್ರಾವತಿ- ಅರಬ್ಬಿ ಸಂಗಮದಲ್ಲಿ ದೋಣಿ ಮುಳುಗಿ ಇಬ್ಬರ ಸಾವು
ಮಂಗಳೂರು : ನೇತ್ರಾವತಿ ಹಾಗೂ ಅರಬ್ಬಿ ಸಮುದ್ರ ಸಂಗಮಗೊಳ್ಳುವ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆಗೆಂದು ಹೋದ ಎರಡು ದೋಣಿಗಳು ಮುಳುಗಿ ಇಬ್ಬರು ಮೃತರಾಗಿದ್ದಾರೆ ಹಾಗೂ ಇತರ 8 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದ್ದು , ಉಳ್ಳಾಲ ಮೊಗವೀರ ಪಟ್ಣದ ನರೇಶ (30) ಹಾಗೂ ಪ್ರಕಾಶ ಬಂಗೇರಾ (35) ನೀರುಪಾಲಾದ ದುರ್ದೈವಿಗಳು.
ಜಲರಾಣಿ ಮತ್ತು ಮೇಘದೂತ ಎಂಬ ಎರಡು ದೋಣಿಗಳಲ್ಲಿ ಒಟ್ಟು 20 ಜನರ ತಂಡ ಮೀನುಗಾರಿಕೆಗೆ ಹೊರಟಿತ್ತು . ಉಳ್ಳಾಲ ಕೋಟೆಪುರದಿಂದ ಹೊರಟ ಈ ಎರಡು ದೋಣಿಗಳು ಅಳಿವೆ ಬಾಗಿಲಿನಲ್ಲಿ ಗಾಳಿಗೆ ಸಿಲುಕಿ ದುರಂತಕ್ಕೆ ಈಡಾದವು. ದಡದಲ್ಲಿದ್ದವರಲ್ಲಿ 7 ಮಂದಿ ಈಜಿ ದಡ ಸೇರಿದರೆ, ಉಳಿದ 5 ಮಂದಿಯನ್ನು ಸ್ಥಳೀಯರು ರಕ್ಷಿಸಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದುರಂತದಲ್ಲಿ ಒಟ್ಟು 9.5 ಲಕ್ಷ ರುಪಾಯಿ ನಷ್ಟ ಸಂಭವಿಸಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ದುರಂತದ ಬಗೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
(ಮಂಗಳೂರು ಪ್ರತಿನಿಧಿಯಿಂದ)