ಪರಾಶಕ್ತಿ ನೋಡಿದ ದಿನವೇ ಶಿವಾಜಿ ಅಭಿಮಾನಿಯಾಗಿಬಿಟ್ಟೆ- ಡಾ.ರಾಜ್
ಚೆನ್ನೈ : ನಟನೆ ಬಗ್ಗೆ ಯಾರೊಬ್ಬರು ಯೋಚಿಸಿದರೂ ಮನಸ್ಸಲ್ಲಿ ಮೂಡುವ ಮೊದಲ ಹೆಸರು ಶಿವಾಜಿ ಗಣೇಶನ್ ಅವರದ್ದು. ತಾವು ಅಭಿನಯಿಸಿದ ಎಲ್ಲಾ ಪಾತ್ರಗಳಿಗೂ ಜೀವತುಂಬಿದ ಮಹಾನ್ ನಟನಾತ. ನಾನು ಮೊದಲು ನೋಡಿದ ಅವರ ಅಭಿನಯದ ಚಿತ್ರ ಪರಾಶಕ್ತಿ. ಅಂದಿನಿಂದ ಅವರ ಅಭಿಮಾನಿಯಾದೆ. ಅಗಲಿದ ತಮಿಳು ಮೇರು ನಟ ಶಿವಾಜಿ ಗಣೇಶನ್ ಬಗ್ಗೆ ಕನ್ನಡದ ವರನಟ ಡಾ.ರಾಜ್ ಆಡಿದ ಮಾತುಗಳಿವು.
ಪತ್ನಿ ಪಾರ್ವತಮ್ಮ ಅವರೊಟ್ಟಿಗೆ ಚೆನ್ನೈಗೆ ಆಗಮಿಸಿದ ವರನಟ ರಾಜ್, ನೇರ ಟಿ.ನಗರದಲ್ಲಿರುವ ಶಿವಾಜಿ ಗಣೇಶನ್ ಅವರ ಮನೆಗೆ ಬಂದರು. ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿದ ರಾಜ್ ದಂಪತಿಗಳು ಪತಿಯ ಕಳಕೊಂಡ ದುಃಖದಲ್ಲಿರುವ ಕಮಲಮ್ಮ ಅವರಿಗೆ ಸಾಂತ್ವನ ಹೇಳಿದರು. ಶಿವಾಜಿ ಪುತ್ರ ಪ್ರಭು ಅವರಿಗೂ ಧೈರ್ಯ ತಂದುಕೊಳ್ಳುವಂತೆ ಹೇಳಿದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ, ಪಾಂಡಿಚೆರಿ ಮುಖ್ಯಮಂತ್ರಿ ಪಿ.ಷಣ್ಮುಗಂ, ಕೇಂದ್ರ ಸಚಿವ ಟಿ.ಆರ್.ಬಾಲು, ಟಿಎಂಸಿ ನಾಯಕ ಜಿ.ಕೆ.ಮೂಪನಾರ್ ಹಾಗೂ ಪಿಎಂಕೆ ವ್ಯವಸ್ಥಾಪಕ ಡಾ.ಎಸ್.ರಾಮದಾಸ್ ಮೊದಲಾದವರು ಶಿವಾಜಿ ಗಣೇಶನ್ ನಿವಾಸಕ್ಕೆ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವರನಟ ರಾಜ್, ತಾವು ಶೂಟಿಂಗ್ನಲ್ಲಿ ನಿರತರಾಗಿರುತ್ತಿದ್ದಾಗ, ಸೆಟ್ಗಳಲ್ಲಿ ಶಿವಾಜಿ ಅವರ ಅಭಿನಯ ನೋಡಿ ಅವಾಕ್ಕಾಗಿದ್ದೆ. ಅವರು ನಮ್ಮನ್ನೆಲ್ಲಾ ಅಗಲಿರುವುದು ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.
ಚಿತ್ರೋದ್ಯಮ ಸ್ಥಗಿತ : ತಮಿಳುನಾಡಿನ ಮೇರು ನಟ ಶಿವಾಜಿ ಅಗಲಿದ ಕಾರಣ, ಅವರಿಗೆ ಗೌರವ ಸೂಚಿಸುವ ಸಲುವಾಗಿ ಭಾನುವಾರ ರಾಜ್ಯದಲ್ಲಿ ಚಿತ್ರೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸೋಮವಾರ ಶಿವಾಜಿ ಗಣೇಶನ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವುದು.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...