ಕುದುರೆಮುಖ ಗಣಿಗಾರಿಕೆ: ಸಂದಿಗ್ಧದಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ
ಬೆಂಗಳೂರು : ಪಶ್ಚಿಮಘಟ್ಟದಲ್ಲಿ ಉಂಟಾಗಬಹುದಾದ ಜೈವಿಕ ವೈಪರೀತ್ಯವನ್ನು ತಡೆಗಟ್ಟಲು ಕೆಐಓಸಿಎಲ್ ಕಂಪೆನಿಗೆ ಗಣಿಗಾರಿಕೆ ಮುಂದುವರೆಸಲು ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳಬೇಕಾಗಿಯೂ ಬರಬಹುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹೇಳಿದ್ದಾರೆ.
ಮೂವತ್ತು ವರ್ಷಗಳ ಹಿಂದೆ ತಾವು ಕೈಗಾರಿಕಾ ಮಂತ್ರಿಯಾಗಿದ್ದಾಗ ಕುದುರೆಮುಖ ಕಂಪೆನಿಗೆ ಗಣಿಗಾರಿಕೆ ಆರಂಭಿಸಲು ಅನುಮತಿ ನೀಡಿದ್ದೆ. ಆಗ ಪರಿಸರವಾದಿಗಳು ಮತ್ತು ಹಿರಿಯರು ಗಣಿಗಾರಿಕೆಯಿಂದ ಸಹ್ಯಾದ್ರಿಯ ಮೇಲಾಗಲಿರುವ ದುಷ್ಪರಿಣಾಮದ ಬಗ್ಗೆ ನನ್ನನ್ನು ಎಚ್ಚರಿಸಿದ್ದರು. ಈಗ ಅದರ ಪರಿಣಾಮವನ್ನು ಸ್ವತಃ ಅನುಭವಿಸುತ್ತಿದ್ದೇವೆ ಎಂದು ಕೃಷ್ಣ ಗುರುವಾರ ವಿಷಾದಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸಹ್ಯಾದ್ರಿ ಬೆಟ್ಟಕ್ಕೆ ಆಗುತ್ತಿರುವ ಹಾನಿಯನ್ನು ಸ್ವತಃ ಕಂಡಿದ್ದೇವೆ. ಪ್ರಸ್ತುತ ಗಣಿಗಾರಿಕೆ ಅವಧಿಯನ್ನು ಮುಂದುವರೆಸುವ ವಿಷಯ ಅತ್ಯಂತ ಸೂಕ್ಷ್ಮ ವಾದುದು. ಯಾಕೆಂದರೆ, ಗಣಿಗಾರಿಕೆಗಾಗಿ ಕಂಪೆನಿಯು ಭಾರೀ ಬಂಡವಾಳ ಹೂಡಿದೆ, ಅತ್ತ ಪರಿಸರದ ವಿಷಯವೂ ಅಷ್ಟೇ ಮುಖ್ಯವಾದುದು ಎಂದು ಮುಖ್ಯಮಂತ್ರಿ ತಮ್ಮ ಸಂದಿಗ್ಧವನ್ನು ಹೇಳಿಕೊಂಡರು.
ಅವರು ಭಾರತೀಯ ವಾಣಿಜ್ಯ ಮಂಡಳಿಗಳ ಮತ್ತು ಕೈಗಾರಿಕೆಗಳ ಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇನ್ನೆರಡು ದಿನಗಳ ಅವಧಿಯಲ್ಲಿ ಕುದುರೆಮುಖ ಗಣಿಗಾರಿಕೆ ಕಂಪೆನಿಯ ಆಡಳಿತ ಮಂಡಳಿ ಮತ್ತು ಪರಿಸರವಾದಿಗಳ ನಡುವೆ ಮಾತುಕತೆ ನಡೆಸಿ, ಈ ಸಮಸ್ಯೆಗೊಂದು ಪರಿಹಾರ ಕಂಡು ಹಿಡಿಯುವುದಾಗಿ ಅವರು ಭರವಸೆಯಿತ್ತರು.
ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಕುದುರೆಮುಖ ಕಂಪೆನಿಗೆ ಗಣಿಗಾರಿಕೆ ಅನುಮತಿಯನ್ನು ನವೀಕರಿಸುವ ಬಗ್ಗೆ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...