ಗಂಗಾ- ಯಮುನಾ-ಗೋಮೂತ್ರದಿಂದತಾಜ್ಮಹಲ್ಗೆ ಅಭಿಷೇಕ
ಲಕ್ನೋ : ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಕಾಲಿಟ್ಟಿದ್ದರಿಂದ ಅಪವಿತ್ರವಾಯಿತು ಎಂಬ ಕಾರಣಕ್ಕೆ ಕ್ರುದ್ಧ ಶಿವಸೇನೆ ಕಾರ್ಯಕರ್ತರು ಗಂಗಾ- ಯಮುನಾ ನೀರು ಹಾಗೂ ಹಸುವಿನ ಗಂಜಲದಿಂದ ಪ್ರೇಮಸೌಧ ತಾಜ್ಮಹಲ್ ಶುದ್ಧೀಕರಣ ಮಾಡಿದ್ದಾರೆ !
ಬಾಟಲಿ ಕೈಲಿ ಹಿಡಿದಿದ್ದ ಶಿವಸೇನೆಯ ಕೆಲವರು ರಕ್ಷಣಾ ಪಹರೆಯವರನ್ನು ಬೇಧಿಸಿ, ತಾಜ್ ಮಹಲ್ ಒಳಗೆ ನುಗ್ಗಿ ಅದರಲ್ಲಿದ್ದ ಗಂಗಾ- ಯಮುನಾ ನದಿಯ ನೀರು ಹಾಗೂ ಹಸುವಿನ ಗಂಜಲ ಸಿಂಪಡಿಸಿದರು. ಈ ಕೆಲಸ ಮಾಡಿದ 12 ಮಂದಿಯನ್ನು ಬಂಧಿಸಿ, ನಂತರ ವೈಯಕ್ತಿಕ ಕಾರಣಗಳಿಂದಾಗಿ ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮುಷರ್ರಫ್ ಅಡಿಯಿಟ್ಟಿದ್ದ ಜಾಗೆಗಳಿಗೆಲ್ಲಾ ಗಂಗಾ- ಯಮುನಾ ಪವಿತ್ರ ಜಲ ಹಾಗೂ ಗೋವಿನ ಗಂಜಲವನ್ನು ಶಿವಸೇನೆ ಕಾರ್ಯಕರ್ತರು ಚುಮುಕಿಸಿದರು. ವಿಶೇಷವಾಗಿ ಪತ್ನಿ ಷೇಬಾ ಜೊತೆ ಮುಷರ್ರಫ್ ಕುಳಿತಿದ್ದ (ಮಾಧ್ಯಮಗಳಲ್ಲಿ ಈ ಚಿತ್ರ ಪ್ರಕಟವಾಗಿದೆ) ಸ್ಥಳಕ್ಕೆ ಶುದ್ಧೀಕರಣ ಕಾರ್ಯದಲ್ಲಿ ಆದ್ಯತೆ ನೀಡಲಾಯಿತು.
ಮಹಾತ್ಮ ಗಾಂಧಿ ಸಮಾಧಿಗೆ ಮುಷರ್ರಫ್ ಪುಷ್ಪಗುಚ್ಛ ಅರ್ಪಿಸಿದ ನಂತರ ಆ ಜಾಗವನ್ನೂ ಶಿವಸೇನೆಯ ಕಾರ್ಯಕರ್ತರು ಶುದ್ಧ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)