ಎಡಗಾಲ ಹೆಬ್ಬರಳ ಮೂಳೆಯಲ್ಲಿ ಬಿರುಕು: ಸದ್ಯಕ್ಕೆ ಸಚಿನ್ ಅಲಭ್ಯ
ಮುಂಬಯಿ : ಶ್ರೀಲಂಕಾದಲ್ಲಿ ನಡೆಯುತ್ತಿರುವ ಕೋಕಾ ಕೋಲಾ ಕಪ್ ಕ್ರಿಕೆಟ್ ತ್ರಿಕೋನ ಸರಣಿಯ ಯಾವುದೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಆಡುವುದಿಲ್ಲ. ಎಡಗಾಲಿನ ಹೆಬ್ಬೆರಳಿನ ಮೂಳೆ ಬಿರುಕು ಬಿಟ್ಟಿರುವುದೇ ಇದಕ್ಕೆ ಕಾರಣ.
ಬುಧವಾರ ಮಧ್ಯಾಹ್ನ ‘ಸಿಟಿ ಸ್ಕ್ಯಾನ್’ ಫಲಿತಾಂಶದಿಂದ ಹೆಬ್ಬೆರಳಿನ ಮೂಳೆಯಲ್ಲಿ ಕೂದಲೆಳೆಯಷ್ಟು ಬಿರುಕು ಇದೆ ಎಂಬುದು ಖಚಿತವಾಯಿತು. ಸ್ಕ್ಯಾನ್ ಫಲಿತಾಂಶ ಪಡೆದ ನಂತರ ಸಚಿನ್ ತೆಂಡೂಲ್ಕರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಶ್ರೀಲಂಕಾ ಪ್ರವಾಸದಲ್ಲಿ ಆಡುವ ಅವಕಾಶ ನನ್ನದಾಗಲಿಲ್ಲ ಎಂಬುದಕ್ಕೆ ಬೇಸರವಾಗಿದೆ ಎಂದು ಸಚಿನ್ ಹೇಳಿದರು.
ಈ ಮೊದಲು ಸಚಿನ್, ತ್ರಿಕೋನ ಸರಣಿಯ ಮೂರು ಲೀಗ್ ಹಾಗೂ ಫೈನಲ್ಸ್ನಲ್ಲಿ ಆಡಲಿದ್ದಾರೆ ಎಂಬ ವಿಶ್ವಾಸವನ್ನು ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದ್ದು, ಭಾರತ ಕ್ರಿಕೆಟ್ ತಂಡ ಸರಣಿಯಲ್ಲಿ ಹೆಣಗಾಡಬೇಕಿರುವುದು ಖಚಿತವಾಗಿದೆ.
ಶ್ರೀಲಂಕಾ ನಾಯಕ ಸನತ್ ಜಯಸೂರ್ಯ, ಭಾರತ ತಂಡ ನಮಗೆ ಲೆಕ್ಕಕ್ಕೇ ಇಲ್ಲ ಎಂದು ಹೇಳಿರುವುದು ಭಾರತದ ಮೇಲೆ ಮಾನಸಿಕ ಒತ್ತಡ ಹೇರಿದೆ. ಸಚಿನ್ ಇಲ್ಲದ ಆರಂಭವನ್ನೇ ಮರೆತಿರುವ ಭಾರತ ತಂಡ ಸರಣಿಯಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧ ಹೇಗೆ ಸೆಣೆಸಲಿದೆ ಎಂಬುದು ಸದ್ಯಕ್ಕೆ ಉತ್ತರ ದೊರೆಯದ ಪ್ರಶ್ನೆ. ಮೊನಚು ಕಳಕೊಂಡಿರುವ ಗಂಗೂಲಿ, ಆತುರಗಾರ ಲಕ್ಷ್ಮಣ್ರಂಥ ಮೇಲಿನ ಕ್ರಮಾಂಕದ ಆಟಗಾರರನ್ನು ಭಾರತ ತಂಡ ನೆಚ್ಚಿಕೊಳ್ಳುವುದಾದರೂ ಹೇಗೆ? ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಭಾರತದ ಮೊದಲ ಪಂದ್ಯ ಇದಕ್ಕೆ ಉತ್ತರ ಕೊಡಲಿದೆ.
ತ್ರಿಕೋನ ಸರಣಿಯ ನಂತರ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಸಚಿನ್ ಆಡುವ ಬಗ್ಗೆ ಖಚಿತವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
(ಇನ್ಫೋ ವಾರ್ತೆ)