ಆಗ್ರಾ ಶೃಂಗಸಭೆ : ಪ್ರಧಾನಿ ನಿಲುವಿಗೆ ಎನ್ಡಿಎ ಬೆಂಬಲ
ನವದೆಹಲಿ : ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರೊಂದಿಗಿನ ಆಗ್ರಾ ಶೃಂಗಸಭೆಯಲ್ಲಿ ಪ್ರಧಾನಿ ವಾಜಪೇಯಿ ತಳೆದ ದೃಢ ನಿಲುವನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬೆಂಬಲಿಸಿದೆ.
ಬುಧವಾರ ಸಂಜೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಎನ್ಡಿಎ ಸಭೆ- ಕಾಶ್ಮೀರ ಕೊಳ್ಳ ಹಾಗೂ ಗಡಿ ಭಾಗಗಳಲ್ಲಿ ನ ಹಿಂಸಾಚಾರದ ಬಗ್ಗೆ ಪ್ರಧಾನಿ ಅವರು ತಾಳಿರುವ ನಿಲುವನ್ನು ಬೆಂಬಲಿಸಿತು. ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸಲು ವಾಜಪೇಯಿ ತೆಗೆದುಕೊಂಡಿರುವ ಕ್ರಮಗಳನ್ನು ಸಭೆ ಶ್ಲಾಘಿಸಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್ ಸಭೆಯ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
ಮುಷರ್ರಫ್ ಅವರೊಂದಿಗಿನ ಭೇಟಿಯ ಬಗೆಗಿನ ವಿವರಗಳನ್ನು ಪ್ರಧಾನಿ ವಾಜಪೇಯಿ ಸಭೆಯ ಗಮನಕ್ಕೆ ತಂದರು. ಆಗ್ರಾ ಶೃಂಗಸಭೆಯಲ್ಲಿ ವಾಜಪೇಯಿ ತೆಗೆದುಕೊಂಡ ನಿಲುವಿನ ಬಗೆಗೆ ಯಾವುದೇ ವಿರೋಧ ಎನ್ಡಿಎ ಸಭೆಯಲ್ಲಿ ವ್ಯಕ್ತವಾಗಲಿಲ್ಲ . ಜುಲೈ 23 ರಂದು ಆರಂಭವಾಗುವ ಮಾನ್ಸೂನ್ ಅಧಿವೇಶನದ ಆರಂಭದ ದಿನ ವಾಜಪೇಯಿ ಶೃಂಗಸಭೆಯ ಕುರಿತು ಸದನದಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಮಹಾಜನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಆಗ್ರಾ ಶೃಂಗಸಭೆ