ಹುಬ್ಬಳ್ಳಿಯಲ್ಲಿ ಕೋಮು ಗಲಭೆ: ಕಲ್ಲು ತೂರಾಟ, ಲಾಠಿ ಪ್ರಹಾರ
ಹುಬ್ಬಳ್ಳಿ : ನಿರ್ದಿಷ್ಟ ಕೋಮಿಗೆ ಸೇರಿದ ಸ್ಮಶಾನದ ಭೂಭಾಗದಲ್ಲಿರುವ ಕಟ್ಟಡವೊಂದರ ದುರಸ್ತಿಗೆ ಸಂಬಂಧಿಸಿದಂತೆ ಉಂಟಾದ ವಾಗ್ವಾದ ಕೋಮು ಘರ್ಷಣೆಗೆ ತಿರುಗಿದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠೀ ಪ್ರಹಾರ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ಹಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.
ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯಾಬ್ಬರು ಗಾಯಗೊಂಡಿದ್ದು, ಎರಡು ಬಸ್ಗಳಿಗೆ ಹಾನಿಯಾಗಿದೆ. ಈ ಸಂಬಂಧ ಎರಡೂ ಕೋಮಿಗೆ ಸೇರಿದ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಬುಧವಾರ ಮಧ್ಯಾಹ್ನ 12-30 ಸುಮಾರಿಗೆ ಉಂಟಾದ ಭೂ ಜಗಳ, ಕೋಮು ಗಲಭೆಗೆ ತಿರುಗಿತು. ಎರಡೂ ಕೋಮಿನವರು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದರು. ಇದನ್ನು ನಿಯಂತ್ರಿಸಲು ಪೊಲೀಸರು ಲಾಠೀ ಪ್ರಹಾರ ಮಾಡಿದರು.
ಘಟನೆಯಿಂದ ಹಳೆ ಹುಬ್ಬಳ್ಳಿ ಪ್ರಾಂತದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಪ್ರಕೋಪಕ್ಕೆ ಹೋಗದಂತೆ ತಡೆಯಲು, ಮಹಾನಗರ ಪಾಲಿಕೆಯ ಮಹಾಪೌರರಾದ ಫಿರ್ದೋಷ್ ಕೊಣ್ಣೂರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಆಯುಕ್ತ ವೈ.ಆರ್. ಪಾಟೀಲ್ ತಿಳಿಸಿದ್ದಾರೆ.
ಈ ಘಟನೆಯಿಂದ ಭಯ ಭೀತರಾದ ಇಂಡಿಪಂಪ್ ವೃತ್ತ ದ ವ್ಯಾಪಾರಿಗಳು ತಮ್ಮ ಅಂಗಡಿ ಮಳಿಗೆಗಳನ್ನು ಮುಚ್ಚಿದ್ದರು. ಮಾಹಾಪೌರರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಶಾಂತಿ ಕಾಪಾಡುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶಾಂತಿ ಸಭೆಯನ್ನೂ ನಡೆಸಲಾಗಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಳಗಾವಿಯಿಂದ ಹೆಚ್ಚುವರಿ ಪೊಲೀಸ್ ತುಕಡಿ ಕರೆಸಿಕೊಳ್ಳಲು ಮನವಿ ಸಲ್ಲಿಸಲಾಗಿದೆ.
(ಯು.ಎನ್.ಐ/ ಇನ್ಫೋ ವಾರ್ತೆ)