ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು 35 ಕೋಟಿ ರು. ಬಿಡುಗಡೆ
ಬೆಂಗಳೂರು : ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರ 35.20 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಕುಡಿಯುವ ನೀರು, ಜಾನುವಾರುಗಳ ಮೇವಿಗಾಗಿ ಮೊದಲು ಆದ್ಯತೆ ನೀಡಲಾಗಿದೆ.
ಅಗತ್ಯ ಕಂಡುಬಂದಲ್ಲಿ 40 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಎಚ್.ಸಿ. ಶ್ರೀಕಂಠಯ್ಯ ವಿಧಾನಸಭೆಯಲ್ಲಿ ಗುರುವಾರ ತಿಳಿಸಿದರು. ಮಳೆ ಬೀಳದೆ, ಊರಿನಲ್ಲಿ ಕೆಲಸ ಇಲ್ಲದಿರುವ ಕಾರಣ ಗುಳೆ ಏಳುತ್ತಿರುವ ಜನರನ್ನು ವಲಸೆ ಹೋಗದಂತೆ ತಡೆಗಟ್ಟಲು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಮೂಲಕ 200 ಕೋಟಿ ರುಪಾಯಿಗಳ ಕಾರ್ಯಕ್ರಮ ರೂಪಿಸಲಾಗಿದೆ ಎಂದೂ ಅವರು ತಿಳಿಸಿದರು.
ರಾಜ್ಯದ ಬರ ಪರಿಹಾರ ಕಾಮಗಾರಿಗಳಿಗಾಗಿ ಕೇಂದ್ರದ ನೆರವು ಬರಬೇಕು. ಕೇಂದ್ರ ನೆರವು ವಿಳಂಬವಾದರೆ, ರಾಜ್ಯ ಸರಕಾರವೇ ತುರ್ತು ಅಗತ್ಯಗಳಿಗೆ ಹಣ ವಿನಿಯೋಗಿಸಲು ಸಿದ್ಧವಿದೆ ಎಂದು ಅವರು ಹೇಳಿದರು. ಜಾನುವಾರುಗಳು ಮೇವಿಲ್ಲದೆ ಸಾವನ್ನಪ್ಪುವುದನ್ನು ತಪ್ಪಿಸಲು ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಗೋಶಾಲೆ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯ ಮೇವಿಗಾಗಿ ಹಣ ಒದಗಿಸಲು ಸಿದ್ಧವಿದೆ ಎಂದು ಹೇಳಿದರು.
ಕೇಂದ್ರ ನೆರವಿಗೆ ಮನವಿ : ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಂದ ಬರ ಪರಿಸ್ಥಿತಿಯ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ, ಶಾಸಕರೊಂದಿಗೆ ಸಮಾಲೋಚಿಸಿ ವರದಿ ನೀಡಿದ್ದಾರೆ. ಈ ಎರಡೂ ವರದಿ ಕ್ರೋಡೀಕರಿಸಿ, 739 ಕೋಟಿ ರುಪಾಯಿ ನೆರವಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದೂ ಶ್ರೀಕಂಠಯ್ಯ ಹೇಳಿದರು.