ವಿಶ್ವಸಂಸ್ಥೆ ಅಧಿವೇಶನದಲ್ಲಿ ಅಟಲ್-ಮುಷರ್ರಫ್ ಮರು ಮುಖಾಮುಖಿ
ನವದೆಹಲಿ : ಪ್ರಧಾನಿ ವಾಜಪೇಯಿ ಹಾಗೂ ಪಾಕ್ ಅಧ್ಯಕ್ಷ ಮುಷರ್ರಫ್ ನಡುವಣ ಆಗ್ರಾ ಶೃಂಗಸಭೆಯ ಬಗ್ಗೆ ಉತ್ತೇಜನಕಾರಿ ಪ್ರತಿಕ್ರಿಯೆ ಕೇಳಿಬರುತ್ತಿದೆಯಾದರೂ, ಈ ಮಾತುಕತೆ ಮತ್ತೂ ಮುಂದುವರಿಯುವ ಲಕ್ಷಣಗಳು ಎದ್ದು ಕಾಣುತ್ತಿವೆ.
ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಉಭಯ ನಾಯಕರು ಈ ಚರ್ಚೆಯನ್ನು ಮುಂದುವರಿಸುವ ಸಾಧ್ಯತೆಗಳಿವೆ. ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ವಾಜಪೇಯಿ ಹಾಗೂ ಮುಷರ್ರಫ್ ಮಾತುಕತೆಯ ಮುಂದುವರಿಕೆಗೆ ಚಾಲನೆ ನೀಡುವ ಸಂಭವವಿದೆ ಎಂದು ಪಾಕ್ನ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.
ಪಾಕ್ಗೆ ಭೇಟಿ ನೀಡುವಂತೆ ಮುಷರ್ರಫ್ ಅವರು ನೀಡಿರುವ ಆಹ್ವಾನವನ್ನು ವಾಜಪೇಯಿ ಆವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆದರೆ, ಈ ಭಾರತ ಭೇಟಿ ವಿಶ್ವಸಂಸ್ಥೆಯ ಅಧಿವೇಶನಕ್ಕಿಂತ ಮುನ್ನವೇ(ಸೆಪ್ಟಂಬರ್ಗಿಂತ ಮೊದಲೇ) ನಡೆಯುತ್ತದೆಯೋ ಇಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲ . ಮಾತುಕತೆಯ ಮೂಲಕ ಉಭಯ ರಾಷ್ಟ್ರಗಳ ನಡುವಣ ವೈಮನಸ್ಯಗಳನ್ನು ತಗ್ಗಿಸಿಕೊಳ್ಳುವ ಬಗ್ಗೆ ಮುಷರ್ರಫ್ ತೀವ್ರ ಆಸಕ್ತಿ ಹೊಂದಿದ್ದಾರೆ ಎಂದು ಪಾಕ್ ಮೂಲಗಳು ತಿಳಿಸಿವೆ.
(ಯುಎನ್ಐ)