ಗಂಗಾಜಲ ಸುರಿದು ಶಿವಸೈನಿಕರಿಂದ ಗಾಂಧಿ ಸಮಾಧಿ ಶುದ್ಧೀಕರಣ
ನವದೆಹಲಿ : ರಾಜಘಾಟ್ನಲ್ಲಿನ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಶನಿವಾರ ಗೌರವ ಸಲ್ಲಿಸಿ ತೆರಳಿದ ನಂತರ ಶಿವಸೇನೆಯ ಕಾರ್ಯಕರ್ತರು ಗಂಗಾಜಲದಿಂದ ಸಮಾಧಿಯನ್ನು ಶುದ್ಧಗೊಳಿಸಿರುವ ವರದಿ ತಡವಾಗಿ ಹೊರಬಿದ್ದಿದೆ.
ಅನೇಕ ಭಾರತೀಯ ಯೋಧರು ಹುತಾತ್ಮರಾದ ಕಾರ್ಗಿಲ್ ಕದನಕ್ಕೆ ಮುಷರ್ರಫ್ ಅವರೇ ಕಾರಣ. ಅವರು ಸಲ್ಲಿಸಿದ ಪುಷ್ಪಗುಚ್ಛಗಳಿಂದ ಗಾಂಧೀಜಿ ಸಮಾಧಿ ಅಪವಿತ್ರಗೊಂಡಿತ್ತು ಎಂದು ಶಿವಸೈನಿಕರ ಕೃತ್ಯವನ್ನು ಪಕ್ಷದ ದೆಹಲಿ ಘಟಕದ ಉಪಾಧ್ಯಕ್ಷ ಓಂದತ್ತ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.
ಗಂಗಾಜಲವನ್ನು ಸುರಿಯುವ ಮೂಲಕ ಸಮಾಧಿಯನ್ನು ಶುದ್ದಿಗೊಳಿಸಲಾಯಿತು. ಈ ಶುದ್ಧೀಕರಣ ಘಟನೆಯ ಹಿನ್ನೆಲೆಯಲ್ಲಿ ಶಿವಸೈನಿಕರಾದ ರೇಣು ಬಾಲಾ, ಜೈ ಪ್ರಕಾಶ್ ಭಾಗೇಲ್, ರಾಜನ್ ಶರ್ಮಾ ಹಾಗೂ ಓಂ ಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಮುಷರ್ರಫ್ ಅವರ ಭೇಟಿಯಿಂದ ಅಪವಿತ್ರಗೊಂಡ ಸಮಾಧಿ ಶುದ್ಧೀಕರಣಕ್ಕಾಗಿ ರಾಜ್ಘಾಟ್ನತ್ತ ಧಾವಿಸಿದ ಸುಮಾರು ಶಿವಸೈನಿಕರ ತಂಡವನ್ನು ಭದ್ರತಾ ಸಿಬ್ಬಂದಿ ತಡೆಗಟ್ಟಿದರೂ, ಕೆಲವರು ರಕ್ಷಣಾ ಪಡೆಯನ್ನು ನುಸುಳಿಕೊಂಡು ಸಮಾಧಿಯ ಮೇಲೆ ಗಂಗಾಜಲ ಸುರಿಯುವಲ್ಲಿ ಯಶಸ್ವಿಯಾದರು ಎಂದು ಶರ್ಮ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
what do you think about this ?
ಮುಖಪುಟ / ಆಗ್ರಾ ಶೃಂಗಸಭೆ