ಭಾರತ - ಪಾಕ್ ಶೃಂಗಸಭೆಯ ಮೊದಲ ಮಾತುಕತೆ ಆಶಾದಾಯಕ
ಆಗ್ರಾ : ಭಾರತದ ಪ್ರಧಾನಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಜನರಲ್ ಮುಷಾರಫ್ ನಡುವೆ ಭಾನುವಾರ ಬೆಳಗ್ಗೆ 11-37ರಲ್ಲಿ ಆರಂಭವಾದ ಮಾತುಕತೆಯು ಮಧ್ನಾಹ್ನ 1-45ರ ಸುಮಾರಿಗೆ ಮುಕ್ತಾಯವಾಗಿದೆ. ನಿಗದಿತ ಸಮಯಕ್ಕಿಂತಲೂ ಹೆಚ್ಚು ಕಾಲ ಈ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.
ಇಲ್ಲಿನ ಜೈಪೀ ಪ್ಯಾಲೇಸ್ ಹೊಟೆಲ್ನಲ್ಲಿ ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಎರಡೂ ದೇಶಗಳ ನಾಯಕರು ತಮ್ಮದೇ ಆದ ದಾಟಿಯಲ್ಲಿ ವಾದ ಮಂಡನೆಯಲ್ಲಿ ತೊಡಗಿದ್ದರು. ಭಾರತವು ಸಮಗ್ರ ಮಾತುಕತೆಯನ್ನು ಬಯಸಿದ್ದರೆ, ಪಾಕಿಸ್ತಾನವು ಕಾಶ್ಮೀರ ವಿಷಯವನ್ನು ತಮ್ಮ ಚರ್ಚಾ ಕಾರ್ಯಕ್ರಮಪಟ್ಟಿಯ ಏಕ ಅಂಶದ ಕಾರ್ಯಕ್ರಮದಂತೆ ಪರಿಗಣಿಸಿತ್ತಾದರೂ, ಮೊದಲ ಹಂತದ ಮಾತುಕತೆ ಆಶಾದಾಯಕವಾಗಿತ್ತು ಎಂದು ಪ್ರಧಾನಿ ಮಂತ್ರಿಗಳ ಕಾರ್ಯಾಲಯ ಮೂಲಗಳು ತಿಳಿಸಿವೆ.
ಈ ಮಾತುಕತೆಯ ಫಲಶ್ರುತಿಯನ್ನು ಅಧಿಕೃತವಾಗಿ ನಿರೀಕ್ಷಿಸಲಾಗುತ್ತಿದೆ. ಈ ನಡುವೆ, ಮುಷರ್ರಫ್ ಅವರು ಭಾರತದ ಪ್ರಧಾನಿ ವಾಜಪೇಯಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸುವ ಸಾಧ್ಯತೆಯೂ ಕಂಡುಬರುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಯು.ಎನ್.ನಲ್ಲಿ ವಾಜಪೇಯಿ ಹಾಗೂ ಮುಷರ್ರಫ್ ಅವರು ಮತ್ತೊಮೆ ಭೇಟಿಯಾಗುವ ಸಂಭವವೂ ಇದೆ.
ಈ ಮಧ್ಯೆ ಪಾಕಿಸ್ತಾನದ ವಿದೇಶಾಂಗ ಸಚಿವ ಅಬ್ದುಲ್ ಸತ್ತಾರ್ ಹಾಗೂ ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರ ನಡುವೆ ನೇರ ಮಾತುಕತೆ ನಡೆಯುತ್ತಿದೆ. ಆಗ್ರಾದಲ್ಲಿ ನಡೆಯುತ್ತಿರುವ ಶೃಂಗಸಭೆಯ ಭದ್ರತೆಗಾಗಿ ಉತ್ತರ ಪ್ರದೇಶ ಸರಕಾರವು 1.5 ಕೋಟಿ ರುಪಾಯಿಗಳನ್ನು ವೆಚ್ಚ ಮಾಡುತ್ತಿದೆ.
ನೂರಕ್ಕೂ ಹೆಚ್ಚು ತಜ್ಞ ವೈದ್ಯರು ಆಗ್ರಾದಲ್ಲಿ ಬೀಡುಬಿಟ್ಟಿದ್ದಾರೆ. ಎಲ್ಲೆಡೆಯೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜನರಲ್ ಮುಷರ್ರಫ್ ಶೃಂಗಸಭೆಯ ಮಾತುಕತೆಯ ಫಲಶ್ರುತಿ ತಿಳಿಸಲು ಮಧ್ಯಾಹ್ನ 2.45ರ ಸುಮಾರಿಗೆ ಪತ್ರಿಕಾ ಗೋಷ್ಠಿ ನಡೆಯುವ ಸಾಧ್ಯತೆ ಇದೆ. ಈ ಮಧ್ಯೆ ಮುಷರ್ರಫ್ ಅವರ ಪತ್ನಿ ಫತೇಪುರ್ ಸಿಕ್ರಿಗೆ ಭೇಟಿ ನೀಡಿದ್ದರು.
ಸರಿದಾರಿಯಲ್ಲಿ ಮಾತುಕತೆ : ಈ ಸಭೆಯಲ್ಲಿ ಇಬ್ಬರು ನಾಯಕರು ಕೇವಲ ಕಾಶ್ಮೀರದ ವಿಚಾರ ಮಾತ್ರ ಚರ್ಚಿಸಿಲ್ಲ. ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ. ಭೋಜನಾ ನಂತರ ನಿಯೋಗಗಳ ನಡುವೆಯೂ ಮಾತುಕತೆ ನಡೆಯಲಿದೆ. ವಾಣಿಜ್ಯ, ಬಾಂಧವ್ಯ ಎಲ್ಲ ವಿಷಯಗಳೂ ಈ ಮಾತುಕತೆಯ ವ್ಯಾಪ್ತಿಯಲ್ಲಿದ್ದು, ಚರ್ಚೆ ಸರಿದಾರಿಯಲ್ಲಿ ಸಾಗುತ್ತಿದೆ ಎಂದು ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಖಾಸಗಿ ಟಿ.ವಿ. ಚಾನಲ್ನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)