ಸೋಮವಾರದಿಂದ ರಾಜ್ಯ ವಿಧಾನಮಂಡಳ ಅಧಿವೇಶನ ಆರಂಭ
ಬೆಂಗಳೂರು : ರಾಜ್ಯ ವಿಧಾನ ಮಂಡಳದ ಮುಂದುವರಿದ ಬಜೆಟ್ ಅಧಿವೇಶನ ಜುಲೈ 16ರ ಸೋಮವಾರದಿಂದ ಪುನಾರಂಭವಾಗಲಿದೆ. ಮುಂಗಾರು ಮಳೆ ಕೈಕೊಟ್ಟು ರಾಜ್ಯ ಬರಗಾಲದ ಭೀತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಅಧಿವೇಶನಕ್ಕೆ ಮಹತ್ವ ಬಂದಿದೆ.
ಮೂರು ತಿಂಗಳ ಸುದೀರ್ಘ ಬಿಡುವಿನ ನಂತರ ವಿಧಾನ ಮಂಡಳದ ಎರಡೂ ಸದನಗಳು ಮತ್ತೆ ಸಮಾವೇಶಗೊಳ್ಳುತ್ತಿವೆ. 2001-02ನೇ ಸಾಲಿನ ರಾಜ್ಯ ಬಜೆಟ್ಗೆ ಅಂಗೀಕಾರ ನೀಡುವುದೂ ಸೇರಿದಂತೆ ಕೆಲವು ಮಹತ್ವದ ವಿಧೇಯಕಗಳು ಉಭಯ ಸದನಗಳ ಸಮ್ಮತಿಗಾಗಿ ಕಾದು ಕುಳಿತಿವೆ.
ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ವರಿಷ್ಠ ಸಮಿತಿಯಿಂದ ಇತ್ತೀಚೆಗಷ್ಟೇ ನಡೆದ ಕೃಷ್ಣ ನೇತೃತ್ವದ ಸರಕಾರದ ಮೌಲ್ಯಮಾಪನವೂ ಸದನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರತಿಪಕ್ಷಗಳಂತೂ ರಾಜ್ಯ ಸರಕಾರದ ವೈಫಲ್ಯಗಳನ್ನು ಪಟ್ಟಿಮಾಡಿಕೊಂಡು ಕೃಷ್ಣ ಸರ್ಕಾರದ ವಿರುದ್ಧ ಹರಿಹಾಯಲು ಸಜ್ಜಾಗಿದ್ದಾರೆ.
ಬರ : ಈ ಮಧ್ಯೆ ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಮಾತ್ರ ಮಳೆಯಾಗಿದ್ದು, ರಾಜ್ಯದ ಬಹುತೇಕ 11 ಜಿಲ್ಲೆಗಳಲ್ಲಿ ಬರದ ಕರಿನೆರಳು ಕವಿದಿದೆ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ಸಾಲದ ಹೊರೆ ತಾಳಲಾರದೆ ರೈತರ ಆತ್ಮಹತ್ಯೆ. ಈ ಎಲ್ಲ ವಿಷಯಗಳೂ ವಿಧಾನ ಮಂಡಳದ ಅಧಿವೇಶನದಲ್ಲಿ ಮಾರ್ದನಿಸಲಿವೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ತಿಂಗಳುಗಳೇ ಕಳೆದಿದ್ದರೂ ಇನ್ನೂ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿ ಗೊಂದಲ ನಿವಾರಣೆ ಆಗದಿರುವುದೂ ಚರ್ಚೆಗೆ ಗ್ರಾಸವಾಗಲಿದೆ. ಆಂಧ್ರಗಡಿಯ ಅಕ್ರಮ ನೀರಾವರಿ ಕಾಮಗಾರಿಗಳು, ಫೀಡರ್ ಕಾಲುವೆ ನಿರ್ಮಾಣ, ಹೆಣ್ಣು ಮಕ್ಕಳ ಮಾರಾಟ, ನೀರಾ ಚಳವಳಿಯ ವಿಷಯಗಳೂ ಪ್ರತಿಪಕ್ಷಗಳ ಪ್ರಮುಖ ಅಸ್ತ್ರಗಳಾಗಲಿವೆ. ಈ ತಿಂಗಳ ಅಂತ್ಯದವರೆಗೂ ಅಧಿವೇಶ ನಡೆಯಲಿದೆ.
(ಇನ್ಫೋ ವಾರ್ತೆ)