ಸೋಮವಾರ ಮತ್ತೊಮ್ಮೆ ಅಟಲ್ -ಮುಷರ್ರಫ್ ಮುಖಾಮುಖಿ
ಆಗ್ರಾ : ಭಾರತದ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಜನರಲ್ ಮುಷರ್ರಫ್ ಅವರು ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗೆ ಮತ್ತೊಮ್ಮೆ ಭೇಟಿ ಮಾಡಿ ನೇರ ಮಾತುಕತೆ ನಡೆಸಲಿದ್ದಾರೆ.
ಭಾನುವಾರ ಈ ಇಬ್ಬರು ನಾಯಕರ ನಡುವೆ ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮಾತುಕತೆಗಳ ಫಲಶ್ರುತಿಯ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಅಧಿಕೃತ ವಕ್ತಾರರಾದ ನಿರುಪಮಾ ರಾವ್ ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಎರಡೂ ರಾಷ್ಟ್ರಗಳ ವರಿಷ್ಠರ ನಡುವೆ ನಡೆದ ಮಾತುಕತೆ ಸೌಹಾರ್ಧಯುತವೂ, ಮುಕ್ತವೂ ಹಾಗೂ ರಚನಾತ್ಮಕವಾಗಿಯೂ ಇತ್ತೆಂದು ಅವರು ತಿಳಿಸಿದರು. ಅಟಲ್ ಹಾಗೂ ಮುಷರ್ರಫ್ ಅವರು ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗೆ ಮತ್ತೊಮ್ಮೆ ಕಲೆತು ಮಾತುಕತೆ ನಡೆಸಲಿದ್ದಾರೆ ಎಂದೂ ಅವರು ಹೇಳಿದರು.
ಎರಡೂ ರಾಷ್ಟ್ರಗಳ ನಿಯೋಗದ ನಡುವೆ ಅಧಿಕಾರಿಗಳ ಮಟ್ಟದಲ್ಲಿ ಹಾಗೂ ಸಚಿವರ ಮಟ್ಟದಲ್ಲಿ ಮಾತುಕತೆಗಳು ಮುಂದುವರಿಯಲಿವೆ. ಮುಷರ್ರಫ್ ಅವರು ಇಸ್ಲಾಮಾಬಾದ್ಗೆ ಬರುವಂತೆ ನೀಡಿದ ಆಹ್ವಾನವನ್ನು ಭಾರತದ ಪ್ರಧಾನಿ ಅಂಗೀಕರಿಸಿದ್ದಾರೆ ಎಂದೂ ಅವರು ತಿಳಿಸಿದರು.
ಪ್ರಧಾನ ಮಂತ್ರಿಗಳ ಕಾರ್ಯಾಲಯದ ಮೂಲಗಳ ರೀತ್ಯ ಅಟಲ್ ಬಿಹಾರಿ ವಾಜಪೇಯಿ ಅವರು ಈ ವರ್ಷದ ಕೊನೆಯ ವೇಳೆಗೆ ಇಸ್ಲಾಮಾಬಾದಿಗೆ ಹೋಗುವ ಸಾಧ್ಯತೆಗಳು ಇವೆ. ಮಿಗಿಲಾಗಿ ಮುಷರ್ರಫ್ ಅವರು ತಮ್ಮ ಭಾರತ ಭೇಟಿಯ ಅವಧಿಯನ್ನು ವಿಸ್ತರಿಸುವ ಸಂಭವವೂ ಇದೆ.
(ಇನ್ಫೋ ವಾರ್ತೆ)
ಮುಖಪುಟ / ಆಗ್ರಾ ಶೃಂಗಸಭೆ