ಮುಷರ್ರಫ್ಗೆ ಸೆಲ್ಯೂಟ್ ಹೊಡೆಯಲು ನಿರಾಕರಿಸಿದ ಏರ್ಚೀಫ್ ಟಿಪ್ನಿಸ್
ನವದೆಹಲಿ : ಕಾರ್ಗಿಲ್ ಯುದ್ಧಕ್ಕೆ ಸೂತ್ರಧಾರನಾದ ಮನುಷ್ಯನನ್ನು ಗೌರವಿಸುವುದು ಹೇಗೆ ? ಇಂಥ ಸಂದಿಗ್ಧ , ಏರ್ ಚೀಫ್ ಮಾರ್ಷಲ್ ಅನಿಲ್ ಯಶವಂತ್ ಟಿಪ್ನಿಸ್ ಅವರನ್ನು ಕಾಡಿತೇನೋ- ಶನಿವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ ಪಾಕ್ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮುಷರ್ರಫ್ ಅವರಿಗೆ ಸೆಲ್ಯೂಟ್ ಹೊಡೆಯಲು ಟಿಪ್ನಿಸ್ ನಿರಾಕರಿಸಿದರು.
ಸ್ವಾಗತ ಸಮಾರಂಭದ ಪ್ರತಿಯಾಂದು ನಡೆಯೂ ಪ್ರೊಟೋಕಾಲ್ಗೆ ಅನುಗುಣವಾಗಿ ನಡೆದರೂ, ಭೂಸೇನೆ, ವಾಯುದಳ ಹಾಗೂ ನೌಕಾದಳಗಳನ್ನು ಪ್ರತಿನಿಧಿಸುತ್ತಿದ್ದ ಏರ್ ಚೀಫ್ ಮಾರ್ಷಲ್ ಟಿಪ್ನಿಸ್ ಅವರು ಮುಷರ್ರಫ್ಗೆ ಸೆಲ್ಯೂಟ್ ಹೊಡೆಯಲು ನಿರಾಕರಿಸುವುದರೊಂದಿಗೆ ತಾವು ಪ್ರತ್ಯೇಕವಾಗುಳಿದರು. ಸೆಲ್ಯೂಟ್ ಹೊಡೆಯುವ ಬದಲು ಟಿಪ್ನಿಸ್ ಅವರು ಮುಷರ್ರಫ್ ಕೈಕುಲುಕಿದರು.
1999 ರಲ್ಲಿ ಭಾರತದ ಪ್ರಧಾನಿ ವಾಜಪೇಯಿ ಲಾಹೋರ್ಗೆ ಭೇಟಿ ಕೊಟ್ಟಿದ್ದಾಗ, ಇಂಥದ್ದೇ ಅಸಮಾಧಾನವನ್ನು ಪ್ರಸ್ತುತ ಭಾರತಕ್ಕೆ ಅಧ್ಯಕ್ಷರಾಗಿ ಬಂದಿರುವ ಮುಷರ್ರಫ್ ಸೃಷ್ಟಿಸಿದ್ದರು. ವಾಘಾ ಗಡಿಗೆ ಆಗಮಿಸಿ ಭಾರತೀಯ ನಾಯಕನನ್ನು ಗೌರವಿಸಲು ಮುಷರ್ರಫ್ ನಿರಾಕರಿಸಿದ್ದರು.
(ಇನ್ಫೋ ವಾರ್ತೆ)