ನಾನು ಮುಕ್ತ ಮನಸ್ಸಿನಿಂದ ಭಾರತಕ್ಕೆ ಬಂದಿದ್ದೇನೆ : ಮುಷಾರಫ್
ನವದೆಹಲಿ : ತಾವು ಮುಕ್ತ ಮನಸ್ಸಿನಿಂದ ಭಾರತಕ್ಕೆ ಬಂದಿರುವುದಾಗಿ ಜನರಲ್ ಮುಷಾರಫ್ ಶನಿವಾರ ಘೋಷಿಸಿದ್ದಾರೆ. ಎರಡೂ ರಾಷ್ಟ್ರಗಳ ಬಾಂಧವ್ಯದ ಮೇಲೆ ಕರಿನೆರಳು ಮೂಡಿಸಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಅರ್ಥಪೂರ್ಣ ಹಾಗೂ ಮುಕ್ತ ಮಾತುಕತೆಯನ್ನು ತಾವು ಎದುರುನೋಡುತ್ತಿರುವುದಾಗಿಯೂಅವರು ಹೇಳಿದ್ದಾರೆ.
ಸುಮಾರು 50 ವರ್ಷಗಳಿಂದಲೂ ಕಾಶ್ಮೀರ ವಿವಾದವು ಭಾರತ ಹಾಗೂ ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಕಪ್ಪು ಛಾಯೆ ಮೂಡಿಸಿದ್ದು, ಭಾರತದ ನಾಯಕರೊಂದಿಗೆ ತಾವು ನಡೆಸುವ ಮಾತುಕತೆಗಳ ಸಂದರ್ಭದಲ್ಲಿ ಈ ಅರ್ಧ ಶತಮಾನದ ಸಮಸ್ಯೆಯನ್ನು ಕಾಶ್ಮೀರಿಗರ ಇಚ್ಛೆಗನುಸಾರವಾಗಿ ಪರಿಹರಿಸಲು ತಮ್ಮೊಂದಿಗೆ ಕೈ ಜೋಡಿಸುವಂತೆ ಆಗ್ರಹಿಸುವುದಾಗಿ ಭಾರತಕ್ಕೆ ಬಂದ ನಂತರ ಮುಷಾರಫ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಾತುಕತೆಯು ಭಾರತ - ಪಾಕಿಸ್ತಾನಕ್ಕೆ ಸಂಬಂಧಿಸಿದ ಇತರ ವಿಷಯ - ವಿವಾದಗಳ ಇತ್ಯರ್ಥಕ್ಕೂ ನೆರವಾಗುವುದಲ್ಲದೆ, ಎರಡೂ ದೇಶಗಳ ಸಂಬಂಧದ ಬಲವರ್ಧನೆಗೆ ನೆರವಾಗಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಪ್ರಧಾನಿ ವಾಜಪೇಯಿ ಅವರೊಂದಿಗೆ ತಾವು ನಡೆಸುವ ಮಾತುಕತೆಗಳಿಂದ ಭಾರತ - ಪಾಕ್ ಬಾಂಧವ್ಯ ಉತ್ತಮಗೊಳ್ಳಲಿದೆ ಎಂಬ ಆಶಾಭಾವನೆಯನ್ನು ಒಂದು ಪುಟಗಳ ಹೇಳಿಕೆಯಲ್ಲಿ ಮುಷಾರಫ್ ವ್ಯಕ್ತಪಡಿಸಿದ್ದಾರೆ.
ತಾವು ಮುಕ್ತ ಮನಸ್ಸಿನಿಂದ ಭಾರತಕ್ಕೆ ಬಂದಿದ್ದು, ಶಾಂತಿ ಮತ್ತು ಉದ್ವಿಗ್ನ ರಹಿತ ಸ್ಥಿತಿಯ ನಿರ್ಮಾಣಕ್ಕಾಗಿ ಹಾಗೂ ಎರಡೂ ದೇಶಗಳ ಪರಸ್ಪರ ಸಹಕಾರ ಸಂಬಂಧ ವರ್ಧನೆಯನ್ನು ಭಾರತೀಯ ನಾಯಕರೊಂದಿಗಿನ ಮಾತುಕತೆಯ ಅವಧಿಯಲ್ಲಿ ತಾವು ಬಯಸಿರುವುದಾಗಿ ಅವರು ತಿಳಿಸಿದ್ದಾರೆ. ವೈಯಕ್ತಿಕವಾಗಿ ಹಾಗೂ ಪಾಕಿಸ್ತಾನದ ಪ್ರಜೆಗಳ ಪರವಾಗಿ ಭಾರತೀಯರೆಲ್ಲರಿಗೂ ಅವರು ಶುಭಾಶಯಗಳನ್ನು ಕೋರಿದ್ದಾರೆ.
(ಸುದ್ದಿಸಂಸ್ಥೆಗಳ ವರದಿ)