ತಾಜ್ ಪ್ಯಾಲೇಸ್ನಲ್ಲಿ ವಾಜಪೇಯಿ- ಮುಷರ್ರಫ್ ಮೇಜವಾನಿ
ನವದೆಹಲಿ : ಊಟದ ಟೇಬಲ್ಲಿನಲ್ಲೇ ಸಮಸ್ಯೆಗಳು ಬಗೆ ಹರಿಯುವಂತಿದ್ದರೆ ಭಾರತ- ಪಾಕ್ ಜಗಳ ಪರಿಹಾರಕ್ಕೆ ಇದಕ್ಕಿಂತ ಸೊಗಸಾದ ವೇದಿಕೆ ಇನ್ನೊಂದಿಲ್ಲ . ತಾಜ್ ಪ್ಯಾಲೇಸ್ಗೀಗ ಅತಿಥಿ ಸತ್ಕಾರದ ಯೋಗ . ಪ್ರಧಾನಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಮಧ್ಯಾಹ್ನದ ಭೋಜನಕೂಟದಿಂದ ತಾಜ್ಗೆ ರೋಮಾಂಚನ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ , ಜಮ್ಮು ಸಂಸದ ಚಮನ್ ಲಾಲ್ ಗುಪ್ತ ಹಾಗೂ ಕಾಶ್ಮೀರಿ ನಾಯಕ ಅಗ್ನಿಶೇಖರ್ ಸೇರಿದಂತೆ 187 ಆಹ್ವಾನಿತರು ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ. ಸಾಂಸ್ಕೃತಿಕ ರಂಗದಿಂದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಸುನೀಲ್ ಗವಾಸ್ಕರ್, ಟೈಗರ್ ಪಟೌಡಿ, ಶರ್ಮಿಳಾ ಟಾಗೋರ್, ಜಾವೇದ್ ಅಖ್ತರ್ ಮುಂತಾದವರು ತಾಜ್ ಆತಿಥ್ಯ ಸವಿಯುತ್ತಿದ್ದಾರೆ. ಐಸ್ಕ್ರೀಂ, ಮಾವಿನಹಣ್ಣುಗಳು, ರುಚಿಕಟ್ಟಾದ ಕಬಾಬ್ ಸೇರಿದಂತೆ ಭಕ್ಷ್ಯ ಭೋಜ್ಯಗಳು ಮುಷರ್ರಫ್- ವಾಜಪೇಯಿ ಮೇಜುವಾನಿಗೆ.
ಇದಕ್ಕೂ ಮುನ್ನ ಮುಷರ್ರಫ್ ಅವರನ್ನು ಭೇಟಿ ಮಾಡಿದ ಗೃಹಮಂತ್ರಿ ಎಲ್.ಕೆ.ಅಡ್ವಾಣಿ ಅವರು ಕಂದಾಹಾರ್ ಹೈಜಾಕ್, ಗಡಿ ಭಾಗಗಳಲ್ಲಿನ ಭಯೋತ್ಪಾದಕತೆ ಹಾಗೂ ದಾವೂದ್ ಇಬ್ರಾಹಿಂ ಸೇರಿದಂತೆ ವಿವಿಧ ವಿಷಯಗಳನ್ನು ಪಾಕ್ ಅಧ್ಯಕ್ಷರೊಂದಿಗೆ ಚರ್ಚಿಸಿದರು. ಊಟದ ನಂತರ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಹಾಗೂ ಪ್ರತಿಪಕ್ಷಗಳ ನಾಯಕಿ ಸೋನಿಯಾಗಾಂಧಿ ಅವರನ್ನು ಮುಷರ್ರಫ್ ಭೇಟಿ ಮಾಡುವ ಕಾರ್ಯಕ್ರಮವಿದೆ.
(ಇನ್ಫೋ ವಾರ್ತೆ)