ಅಹಿಂಸೆಗಾಗಿ ಜೀವನವಿಡೀ ಹೋರಾಡಿದ ವ್ಯಕ್ತಿ ಗಾಂಧೀಜಿ- ಮುಷರ್ರಫ್
ನವದೆಹಲಿ : ತುಂತುರು ಮಳೆಯ ನಡುವೆ ರಾಜ್ಘಾಟ್ಗೆ ಪತ್ನಿಯಾಂದಿಗೆ ಆಗಮಿಸಿದ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಗಾಂಧಿ ಅವರ ಸಮಾಧಿಗೆ ಗೌರವ ಪೂರ್ವಕವಾಗಿ ಪುಷ್ಪಗುಚ್ಛ ಸಲ್ಲಿಸಿದರು.
ಅಹಿಂಸೆಗಾಗಿ ಜೀವನಪೂರ್ತಿ ಹೋರಾಟ ನಡೆಸಿದ ವ್ಯಕ್ತಿ ಗಾಂಧೀಜಿ . ಅವರ ಜೀವನ ಹಾಗೂ ಧ್ಯೇಯ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಆದರ್ಶವಾಗಿವೆ ಎಂದು ಮುಷರ್ರಫ್ ಗಾಂಧೀಜಿ ಅವರ ಬಗೆಗೆ ಸಂದೇಶ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು. ಅಂದಹಾಗೆ, ರಾಜ್ಘಾಟ್ಗೆ ಆಗಮಿಸಿದ ಮೊದಲ ಪಾಕಿಸ್ತಾನ ನಾಯಕ ಎನ್ನುವ ಗೌರವ ಮುಷರ್ರಫ್ ಅವರದು.
ಗಾಂಧೀಜಿ ಅವರ ಸಮಾಧಿಗೆ ಗುಲಾಬಿ ಪಕಳೆಗಳನ್ನು ಸಲ್ಲಿಸಿದ ಮುಷರ್ರಫ್ ಒಂದು ನಿಮಿಷ ಕಾಲ ಶ್ರದ್ಧಾಂಜಲಿ ಸಲ್ಲಿಸಿದರು. ಫೋಟೋ ಕ್ಲಿಕ್ಕಿಸಲು ಅನುಕೂಲವಾಗುವಂತೆ ಪತ್ರಕರ್ತರ ಕೋರಿಕೆಯ ಮೇರೆಗೆ ಮುಷರ್ರಫ್ ಮತ್ತಷ್ಟು ಗುಲಾಬಿ ಪಕಳೆಗಳನ್ನು ಸಮಾಧಿಗೆ ಸಲ್ಲಿಸಿದರಾದರೂ, ಸುದ್ದಿಗಾರರ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅವರ ಒಂದು ಸಾಲಿನ ಉತ್ತರ- ‘ಪ್ರಶ್ನೆಗಳು ಆನಂತರ’.
ಇದೇ ಸಂದರ್ಭದಲ್ಲಿ ಹಿರಿಯ ಗಾಂಧಿವಾದಿ ನಿರ್ಮಲಾ ದೇಶಪಾಂಡೆ ಅವರು- ‘ದಿ ಮೈಂಡ್ ಆಫ್ ಮಹಾತ್ಮಗಾಂಧಿ’ ಸೇರಿದಂತೆ ಗಾಂಧೀಜಿ ಲೇಖನಗಳು, ಗಾಂಧಿ ಬಗೆಗಿನ ಸಿಡಿ ರೋಮ್ ಹಾಗೂ ಚರಕವೊಂದನ್ನು ಮುಷರ್ರಫ್ ಅವರಿಗೆ ಸ್ಮರಣಿಕೆಯಾಗಿ ನೀಡಿದರು.
(ಏಜೆನ್ಸೀಸ್)