ಮೂರನೆಯವರಿಗೆ ಮೂಗು ತೂರಿಸುವ ಅವಕಾಶ ಇಲ್ಲ - ವಾಜಪೇಯಿ
ನವದೆಹಲಿ : ಭಾರತ- ಪಾಕಿಸ್ತಾನ ಮಾತುಕತೆ ನಡುವೆ ಮೂರನೆಯವರಿಗೆ ಮೂಗು ತೂರಿಸಲು ಅವಕಾಶ ಇಲ್ಲ . ಹಳೆಯ ವೈಷಮ್ಯಗಳನ್ನು ಹೂತುಹಾಕಿ, ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ರೂಪಿಸುವ ಉದ್ದೇಶದಿಂದ ಸ್ಪಷ್ಟ ಚರ್ಚೆ ಮಾಡುವುದು ಮುಷರ್ರಫ್ ಆಶಯ ಎಂದು ನಾನು ಭಾವಿಸಿದ್ದೇನೆ. ಮಾತುಕತೆಯಲ್ಲಿ ಮೂರನೆಯವರಿಗೆ ಮೂಗು ತೂರಿಸಲು ಅವಕಾಶ ಇಲ್ಲ ಎಂದು ಪ್ರಧಾನಿ ಎ.ಬಿ.ವಾಜಪೇಯಿ ಕಡ್ಡಿ ತುಂಡುಮಾಡಿದಂತೆ ಹೇಳಿದ್ದಾರೆ.
ಭಾರತದ ಸುಮಾರು 500 ಯೋಧರ ಸಾವಿಗೆ ಕಾರಣವಾದ ಕಾರ್ಗಿಲ್ ಯುದ್ಧದ ಹಿಂದಿನ ಕೈ ಪರ್ವೇಜ್ ಮುಷರ್ರಫ್ ಎನ್ನಲಾಗುತ್ತಿದೆ. ಅವರ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಪ್ರಧಾನಿ ಕೊಟ್ಟ ಉತ್ತರ ಹೀಗಿದೆ- ಕಾರ್ಗಿಲ್ ಕಿತ್ತುಕೊಳ್ಳುವ ಪಾಕಿಸ್ತಾನದ ಯತ್ನವನ್ನು ವಿಫಲಗೊಳಿಸಿದ ನಮ್ಮ ಪಡೆಗಳ ಯೋಧರ ಧೈರ್ಯ ಹಾಗೂ ತ್ಯಾಗಗಳನ್ನು ಯಾರೂ ಮರೆಯುವ ಹಾಗಿಲ್ಲ. ಆದರೂ ನಾವು ಮುಂದುವರೆಯಲೇಬೇಕಾಗಿದೆ.
ಸಿಮ್ಲಾ ಒಪ್ಪಂದ ಹಾಗೂ ಲಾಹೋರ್ ಘೋಷಣೆಗಳಿಗೆ ಅನುಗುಣವಾಗಿ ದ್ವಿಪಕ್ಷೀಯ ಮಾತುಕತೆ ಶಾಂತ ರೀತಿಯಲ್ಲಿ ನಡೆಯಬೇಕು ಅಷ್ಟೆ . ಪಾಕಿಸ್ತಾನ ಕೂಡ ಇದಕ್ಕೆ ಬದ್ಧವಾಗಿದೆ ಎಂದು ಚರ್ಚೆಯಲ್ಲಿ ಹುರಿಯತ್ ಪಾಲ್ಗೊಳ್ಳುವಿಕೆ ಬಗ್ಗೆ ಪ್ರಧಾನಿ ಪ್ರತಿಕ್ರಿಯಿಸಿದರು. ಆದರೆ ಸಿಮ್ಲಾ ಒಪ್ಪಂದ ಹಾಗೂ ಲಾಹೋರ್ ಘೋಷಣೆಗಳನ್ನು ಈಗಾಗಲೇ ಮುಷರ್ರಫ್ ತಿರಸ್ಕರಿಸಿದ್ದಾರೆ. ಹುರಿಯತ್ ಕೂಡ ಮಾತುಕತೆಯಲ್ಲಿ ತೊಡಗಬೇಕೆಂಬುದು ಮುಷರ್ರಫ್ ನಿಲುವು.
ಕಾಶ್ಮೀರ ಸಮಸ್ಯೆಗೆ ಚರ್ಚೆಯಲ್ಲಿ ಒತ್ತು. ಹಾಗಂತ ಯಾವುದೇ ಸಮಸ್ಯೆಗಳನ್ನು ಕಡೆಗಣಿಸುವುದೂ ಇಲ್ಲ. ಶಾಂತಿ ಹಾಗೂ ಸೌಹಾರ್ದತೆ ನೆಲೆಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪಾಕಿಸ್ತಾನದ ಸಹಕಾರ ಹಾಗೂ ಬಾಂಧವ್ಯಕ್ಕೆ ಭಾರತ ಒಲವು ತೋರುತ್ತಲೇ ಬಂದಿದೆ. 1998ರಲ್ಲಿ ಪಾಕ್ ಜೊತೆ ಭಾರತ ನಡೆಸಿದ ಮಾತುಕತೆ ಹಾಗೂ 1999ರಲ್ಲಿ ಲಾಹೋರಿಗೆ ನಾನು ಭೇಟಿ ಕೊಟ್ಟಿದ್ದರ ಹಿಂದಿನ ಉದ್ದಿಶ್ಯವೂ ಇದೇ ಆಗಿತ್ತು ಎಂದು ವಾಜಪೇಯಿ ಹೇಳಿದರು.
(ಏಜೆನ್ಸೀಸ್)